ಹೆಬ್ಬಾಳ್ ಟೋಲ್ಗೇಟ್ನಲ್ಲಿ ಅವೈಜ್ಞಾನಿ ಟೋಲ್ ದರ ನಿಗದಿ: ಆರೋಪ
ದಾವಣಗೆರೆ, ನ.13: ತಾಲೂಕಿನ ಹೆಬ್ಬಾಳ್ ಟೋಲ್ಗೇಟ್ನಲ್ಲಿ ಟೋಲ್ ದರವನ್ನು ಅವೈಜ್ಞಾನಿಕವಾಗಿ ನಿಗದಿಪಡಿಸಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಿದರು.
ನೂರಾರು ಸಾರ್ವಜನಿಕರು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಟೋಲ್ಗೇಟ್ನಲ್ಲಿ ಈ ಹಿಂದೆ ದಾವಣಗೆರೆ ವಾಹನಗಳಿಗೆ 35 ರು. ಇದ್ದು, ಇದೀಗ ದಿಢೀರನೆ 75 ರು. ಏರಿಕೆ ಮಾಡಲಾಗಿದೆ. ಈ ಕ್ರಮ ಅವೈಜ್ಞಾನಿಕವಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ದರ ಏರಿಕೆ ಬಗ್ಗೆ ಸಾರ್ವಜನಿಕರು ಆಕ್ಷೇಪಿಸಿದರೆ ಅಲ್ಲಿನ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಈ ಬಗ್ಗೆಯೂ ಹಲವು ಬಾರಿ ಟೋಲ್ ಸಿಬ್ಬಂದಿಗಳೊಂದಿಗೆ ಗಲಾಟೆಗಳಾಗಿ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಸಹ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಚಿವರ ಗಮನಕ್ಕೆ ತಂದರು, ಸಾರ್ವಜನಿಕರ ಈ ಮನವಿ ಸ್ಪಂದಿಸಿದ ಸಚಿವರು ಈ ಬಗ್ಗೆ ನಮಗೆ ಅನೇಕ ಬಾರಿ ಮೌಖಿಕ ದೂರುಗಳು ಬಂದಿವೆ, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಸೂಚಿಸಲಾಗುವುದು ಎಂದರು.
ಈ ವೇಳೆ ಪಾಲಿಕೆ ಮಾಜಿ ವಿಪಕ್ಷ ನಾಯಕ ಡಿ.ಎನ್.ಜಗದೀಶ್, ಎಸ್.ಎನ್.ಬಾಲಾಜಿ, ಎ.ನಾಗರಾಜ್, ಎಂ.ಜೆ.ನಾಗರಾಜ್, ಹಾಸಬಾವಿ ಜಯದೇವ್, ಅಣಬೇರು ಜಗದೀಶ್, ವೆಂಕಟೇಶ್, ಮಹಾಂತೇಶ್, ಶಿವಾನಂದ್, ಚಂದ್ರಹಾಸ್, ಮಂಜುಶ್ರೀ, ರಾಮೇಗೌಡ, ಕುಂದವಾಡ ಗಣೇಶ್, ಎನ್.ಟಿ.ಹನುಮಂತಪ್ಪ, ಸಂತೋಷ್ ಮತ್ತಿತರರಿದ್ದರು.