ಮಸೂದೆ ಜನ ವಿರೋಧಿಯಾದರೆ ಆ ಕ್ಷಣದಿಂದಲೇ ರಾಜಕೀಯ ನಿವೃತ್ತಿ: ಸಚಿವ ರಮೇಶ್ ಕುಮಾರ್
ಬೆಂಗಳೂರು, ನ.13: : “ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ವಿಧೇಯಕ ಜನವಿರೋಧಿಯಾದರೆ ನಾನು ಆಕ್ಷಣದಿಂದಲೇ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ “ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ.
ವಿಧಾನ ಪರಿಷತ್ ನಲ್ಲಿ ಹೇಳಿಕೆ ನೀಡಿದ ಅವರು “ನನ್ನ ಹಠಿದಿಂದ ಮೂವರು ಅಮಾಯಕರು ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಆರೋಪ ಕೇಳಿ ಬಂದ ಬಳಿಕ ನನಗೆ ರಾತ್ರಿಯಿಡೀ ನಿದ್ದೆ ಬಂದಿಲ್ಲ. ಇದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ” ಎಂದರು.
“ನಾನು ತಂದಿರುವ ನನ್ನ ವಿಧೇಯಕದ ಬಗ್ಗೆ ತೃಪ್ತಿ ಇದೆ ”ಎಂದು ರಮೇಶ್ ಕುಮಾರ್ ಹೇಳಿದರು.
‘ರಮೇಶ್ ಕುಮಾರ್ ಕೊಲೆಗೆಡುಕ ಮತ್ತು ಅವರಿಗೆ ಮಕ್ಕಳಿಲ್ಲ ’ಎಂದು ಬಿಜೆಪಿಯ ಕೆ.ಎಸ್.ಈಶ್ವರಪ್ಪ ಮಾಡಿರುವ ಆರೋಪಕ್ಕೆ ರಮೇಶ್ ತಿರುಗೇಟು ನೀಡಿದ ರಮೇಶ್ ಕುಮಾರ್ “ನನಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬಳು ಮಗಳು, ಮತ್ತೊಬ್ಬ ಮಗ . ನನಗೆ ಮಾನಗೆಟ್ಟಿರಬಹುದು. ಆದರೆ ನನ್ನ ಮಕ್ಕಳು ಮಾನಗೆಟ್ಟಿಲ್ಲ. ಅವರು ವಿದೇಶದಲ್ಲಿದ್ದಾರೆ. ನಾನು ಕೊಲೆಗೆಡುಕನಾಗಿದ್ದರೆ ಇಲ್ಲಿಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ” ಎಂದು ಭಾವುಕರಾಗಿ ನುಡಿದರು.