ಚಿಕ್ಕಮಗಳೂರು: ಗೋ ಮಧುಸೂಧನ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಚಿಕ್ಕಮಗಳೂರು, ನ.14: ಬಿಜೆಪಿ ವಕ್ತಾರ, ಮಾಜಿ ಎಂಎಲ್ಸಿ ಗೋ ಮಧುಸೂಧನ್ ಸಂವಿಧಾನ ವಿರೋಧಿಸಿ ಹೇಳಿಕೆ ನೀಡುತ್ತಿರುವುದು ದೇಶದ್ರೋಹಿ ಕಾರ್ಯ ಎಂದು ಆರೋಪಿಸಿ ಬ್ಲಾಕ್ ಕಾಂಗ್ರೆಸ್ನ ಜಿಲ್ಲಾ ಪರಿಶಿಷ್ಟ ವಿಭಾಗದ ಕಾರ್ಯಕರ್ತರು ಮಂಗಳವಾರ ನಗರದ ಆಝಾದ್ ಪಾರ್ಕ್ನಲ್ಲಿ ಗೋ ಮಧುಸೂಧನ್ ಅವರ ಪ್ರತಿಕೃತಿ ಧಹಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಎಸ್ಸಿ ವಿಭಾಗದ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಜಿಪಂ ಸದಸ್ಯ ಹೂವಪ್ಪ ಮಾತನಾಡಿ, ಗೋಮುಖ ವ್ಯಾಘ್ರ ಮತ್ತು ಗೋರಿಲ್ಲಾ ಸಂತತಿಯ ಗೋಮಧುಸೂಧನ್ರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಎಸ್ಸಿ ವಿಭಾಗದ ಬ್ಲಾಕ್ ಅಧ್ಯಕ್ಷ ಹೊನ್ನೇಶ್ ತಿಲಕ್ ಮಾತನಾಡಿ, ಪರಿಶಿಷ್ಟರನ್ನು ನಿಂದಿಸುವುದೇ ಬಿಜೆಪಿಯವರ ಕೆಲಸವಾಗಿದೆ ಇಡೀ ಪ್ರಪಂಚವೆ ಮೆಚ್ಚಿಗೆ ವ್ಯಕ್ತಪಡಿಸುವ ಸಂವಿಧಾನದ ಬಗ್ಗೆ ಅವಹೇಳನಕಾರಿ ಮಾತನಾಡಿರುವ ಮಧುಸೂಧನ್ಗೆ ಧಿಕ್ಕಾರವಿರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನದ ಕಲಂ ಅನ್ವಯ ಜನಪ್ರತಿನಿಧಿ ಸ್ಥಾನ ಅಲಂಕರಿಸಿದ್ದ ಗೋ ಮಧುಸೂಧನ್ ಸಂವಿಧಾನವೇ ಸರಿ ಇಲ್ಲ ಎಂದು ಹೇಳಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಈ ಬಗ್ಗೆ ಕಠಿಣ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿ ಸರಕಾರಕ್ಕೆ ಕಾಂಗ್ರೆಸ್ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಹಿರೇಮಗಳೂರು ರಾಮಚಂದ್ರ, ನಗರಸಭೆ ಸದಸ್ಯ ಪುಟ್ಟಸ್ವಾಮಿ ಮಾತನಾಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಡಿ.ಎಲ್.ವಿಜಯಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್ ಮೂರ್ತಿ, ಕಾರ್ಯದರ್ಶಿ ಕೆ.ಎಂ ನಾಗರಾಜ್, ಅರಣ್ಯ ಮತ್ತು ವಸತಿ ನಿಗಮದ ಅಧ್ಯಕ್ಷ ಎ.ಎನ್ ಮಹೇಶ್, ಪಂಚಾಯತ್ ರಾಜ್ ರಾಜ್ಯ ಸಂಚಾಲಕ ಬಿ.ಎಂ. ಸಂದೀಪ್, ಮಾಜಿ ಎಂಎಲ್ಸಿ ಗಾಯಿತ್ರಿ ಶಾಂತೇಗೌಡ, ಮಹಾ ಪ್ರಧಾನ ಕಾರ್ಯದರ್ಶಿ ಕೆ.ಮೊಹಮ್ಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದ ಸ್ವಾಮಿ, ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ನಿಸಾರ್ ಅಹ್ಮದ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್, ಎನ್ ಎಸ್ ಯುಐ ಜಿಲ್ಲಾಧ್ಯಕ್ಷ ಆದಿಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಮತ್ತಿರರಿದ್ದರು.