ನ.19: ಶತಮಾನ ಹೊಸ್ತಿಲಲ್ಲಿರುವ ಪುರವರ್ಗ ಕನ್ನಡ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘ ಉದ್ಘಾಟನೆ
ಭಟ್ಕಳ, ನ. 14: ಶತಮಾನೋತ್ಸವದ ಸಮೀಪವಿರುವ ತಾಲೂಕಿನ ಪುರವರ್ಗದ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳ ಕಲ್ಪಿಸುವಿಕೆ ಮತ್ತು ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಅಳವಡಿಕೆ ಉದ್ದೇಶಕ್ಕಾಗಿ ರಚನೆಗೊಂಡ ಹಳೆಯ ವಿದ್ಯಾರ್ಥಿ ಸಂಘ ನವೆಂಬರ್ 19 ರಂದು ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಕರ್ನಾಟಕ ಉಚ್ಛನ್ಯಾಯಾಲಯದ ಹಿರಿಯ ನ್ಯಾಯವಾದಿ ಆರ್.ನಾಗೇಂದ್ರ ನಾಯ್ಕರವರು ಉದ್ಘಾಟನೆ ನೆರವೇರಿಸಲಿದ್ದು, ನೂತನ ಅಧ್ಯಕ್ಷ ಮೃತ್ಯುಂಜಯ ಆಚಾರ್ಯರವರು ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಮ್ಮ ಮರಿಸ್ವಾಮಿ, ಗೊರ್ಟೆ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾದ್ಯಾಯ ರಾಘವೇಂದ್ರ ನಾಯ್ಕ, ಉದ್ಯಮಿ ಈರಪ್ಪ ಗರ್ಡೀಕರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕರಿಯಪ್ಪ ನಾಯ್ಕ, ಮುನ್ನವರ ಪೇಶಮಾಮ್, ಉದಯ ನಾಯ್ಕ, ಸುರೇಶ ನಾಯ್ಕ, ಮೆರಿ ರೊಡ್ರಿಗಸ್, ಮಾದೇವ ನಾಯ್ಕ ಮತ್ತಿತರ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಅದೇ ದಿನ ಬೆಳಗ್ಗೆ ಹಳೆ ವಿದ್ಯಾರ್ಥಿಗಳ ಸಮ್ಮಿಲನದಲ್ಲಿ ಸಮಾಜಸೇವಕ, ಗೌರವಾಧ್ಯಕ್ಷ ಅಣ್ಣಪ್ಪ ಅಬ್ಬಿಹಿತ್ತಲರವರ ಅಧ್ಯಕ್ಷತೆಯಲ್ಲಿ ಚಿಂತನ-ಮಂಥನ ಕಾರ್ಯಕ್ರಮ, ಸಂಜೆ ಕ್ರೀಡಾಕೂಟ, ಶಾಲಾ ವಿದ್ಯಾರ್ಥಿಗಳಿಂದ ಮನರಂಜನೆ ರಾತ್ರಿ ವಿಶ್ವದೀಪ ಕಲಾ ನಿಕೇತನ ಸಂಸ್ಥೆ ಬೆಳಕೆಯವರಿಂದ ಡಾನ್ಸ್ ದಮಾಕ ಕಾರ್ಯಕ್ರಮವಿದೆ ಎಂದು ಸಂಘಟಕರು ತಿಳಿಸಿರುತ್ತಾರೆ.