ಮಡಿಕೇರಿಯಲ್ಲಿ ಸಿಬಿಐ ಮಹಜರು
ಡಿವೈಎಸ್ಪಿ ಗಣಪತಿ ಪ್ರಕರಣ
ಮಡಿಕೇರಿ, ನ.14: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಬಿಐ ಅಧಿಕಾರಿ ಗಳ ತಂಡ ಮಂಗಳವಾರ ಜಿಲ್ಲಾ ಕೇಂದ್ರ ಮಡಿಕೇರಿಗೆ ಆಗಮಿಸಿ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ ವಿನಾಯಕ ಲಾಡ್ಜ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಕಲೆಹಾಕಿತು.
ಇಂದು ನಗರದ ಖಾಸಗಿ ಬಸ್ ನಿಲ್ದಾಣ ಬಳಿಯ ವಿನಾಯಕ ಲಾಡ್ಜ್ಗೆ ಭೇಟಿ ನೀಡಿದ ಸಿಬಿಐ ತನಿಖಾಧಿಕಾರಿ ಎಸಿಪಿ ಕಲೈಮಣಿ ನೇತೃತ್ವದ ಹತ್ತು ಮಂದಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು.
ಗಣಪತಿ ಅವರು ಸಾವನ್ನಪ್ಪಿದ ಸಂದರ್ಭ ಸ್ಥಳ ಮಹಜರಿಗೆ ಸಹಿ ಹಾಕಿದವರು ಸೇರಿದಂತೆ ಅಂದು ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಗಣಪತಿ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯಾಧಿಕಾರಿಯನ್ನು ಲಾಡ್ಜ್ಗೆ ಕರೆಯಿಸಿ ವಿಚಾರಣೆ ನಡೆಸಲಾಯಿತು. ಅಲ್ಲದೆ, ಗಣಪತಿ ಅವರು ಸಾವಿಗೀಡಾಗಿದ್ದ ವಿನಾಯಕ ಲಾಡ್ಜ್ನ ಕೊಠಡಿ ಸಂಖ್ಯೆ 315ರಲ್ಲಿ ಪರಿಶೀಲನೆ ನಡೆಸಲಾಯಿತು.
ಅಧಿಕಾರಿಗಳ ತಂಡದೊಂದಿಗೆ ದಿಲ್ಲಿಯಿಂದ ಫಾರೆನ್ಸಿಕ್ ತಜ್ಞರು ಆಗಮಿಸಿದ್ದರು. ಲಾಡ್ಜ್ನ ಕೊಠಡಿಯ ಸೀಲ್ ತೆಗೆದು ಒಳಪ್ರವೇಶಿಸಿದ ಅಧಿಕಾರಿಗಳು ಹಾಗೂ ಫಾರೆನ್ಸಿಕ್ ತಜ್ಞರು ಸ್ಥಳ ಮಹಜರು ನಡೆಸಿದರು.