ಬಿಲ್ಲವರಿಗೆ ಅವಮಾನದ ಆರೋಪ: ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ವ್ಯಾಪಕ ಆಕ್ರೋಶ
ಬೈಂದೂರಿನ ನಾಗೂರ್ ನಲ್ಲಿ ನಡೆದ ಬಿಜೆಪಿಯ ಪರಿವರ್ತನಾ ರ್ಯಾಲಿ
ಬೈಂದೂರು, ನ. 14: ಕೇಂದ್ರ ಸರ್ಕಾರದ ಸಚಿವ ಅನಂತ್ ಕುಮಾರ್ ಹೆಗಡೆ ನ. 13ರಂದು ಸಂಜೆ ಬೈಂದೂರಿನ ನಾಗೂರ್ ನಲ್ಲಿ ನಡೆದ ಬಿಜೆಪಿಯ ಪರಿವರ್ತನಾ ರ್ಯಾಲಿಯ ತನ್ನ ಭಾಷಣದಲ್ಲಿ 'ಪೂಜಾರಿಯ ಪುಂಗಿ ಬಂದ್ ಆಗಬೇಕು' ಎಂದು ಹೇಳಿಕೆ ನೀಡಿರುವುದಕ್ಕೆ ಫೇಸ್ ಬುಕ್ ಮತ್ತು ವಾಟ್ಸ್ ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣ ಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿವೆ.
ಬಿಲ್ಲವರನ್ನು ಕೇಂದ್ರ ಸಚಿವ ಅವಮಾನಿಸಿದ್ದು, ಇಡೀ ಬಿಲ್ಲವ ಸಮುದಾಯಕ್ಕೆ ಮಾಡಿದ ಅವಮಾನ, ಹೆಗಡೆಯ ಈ ಮಾತು ಕೇಳಿದ ಜನರು ಅಲ್ಲಿ ಕುಳಿತು ಚಪ್ಪಾಳೆ ತಟ್ಟಿದರೆ ಹೊರತು ವಿರೋಧಿಸಿಲ್ಲ ಎಂದೂ ಹಾಗು ಇನ್ನಿತರ ಆಕ್ರೋಶದ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
'ಬೈಂದೂರು ಕ್ಷೇತ್ರದ ಬಿಲ್ಲವರೆಲ್ಲರು ಪಕ್ಷಬೇಧ ಮರೆತು ಬಿಲ್ಲವ ಸಮುದಾಯಕ್ಕೆ ಅವಮಾನ ಮಾಡಿದ ಅನಂತ್ ಕುಮಾರ್ ಹೆಗಡೆ ವಿರುದ್ಧ ಪ್ರತಿಭಟನೆ ನಡೆಸಿ 'ಪೂಜಾರಿಯ ಪುಂಗಿ ಬಂದ್ ಆಗುವುದಿಲ್ಲ' ಎಂಬುದನ್ನು ಖಾತ್ರಿ ಪಡಿಸೋಣ ಎಂಬ ಹೇಳಿಕೆಗಳು ಸಾರ್ವಜನಿಕರಿಂದ ವ್ಯಕ್ತವಾಗುತ್ತಿದ್ದು, ಹೆಗಡೆ ಬಹಿರಂಗವಾಗಿ ಬಿಲ್ಲವ ಸಮುದಾಯದ ಕ್ಷಮೆ ಯಾಚಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಲಾಗಿದೆ.