ಹುಣಸೂರಿನಲ್ಲಿ ಅಪಘಾತ: ಗಾಯಗೊಂಡವರು ಮಂಗಳೂರು ಆಸ್ಪತ್ರೆಗೆ ದಾಖಲು
ಹುಣಸೂರು/ಮಂಗಳೂರು, ನ.14: ಮೈಸೂರು ಸಮೀಪದ ಹುಣಸೂರು ಬಳಿ ಮಂಗಳವಾರ ಮುಂಜಾನೆ ಸಂಭವಿಸಿದ ವಾಹನ ಅಪಘಾತದಲ್ಲಿ ಉಳ್ಳಾಲದ ಒಂದೇ ಕುಟುಂಬದ ಮೂವರು ಮೃತಪಟ್ಟು, 16 ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ.
ಗಾಯಾಳುಗಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಯಿಂದ ಇದೀಗ ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೂಲತಃ ಉಳ್ಳಾಲ ಮಾಸ್ತಿಕಟ್ಟೆಯ ಪ್ರಸ್ತುತ ತೊಕ್ಕೊಟ್ಟು ವಿನ ವಸತಿ ಸಂಕೀರ್ಣವೊಂದರಲ್ಲಿ ವಾಸವಾಗಿದ್ದ ಅಬ್ದುಲ್ ಹಮೀದ್(52) ಮತ್ತವರ ಪುತ್ರ ಶೇಖ್ ಹಕೀಫ್ (11) ಹಾಗೂ ಹಮೀದ್ರ ಸಹೋದರ ಮುಹಮ್ಮದ್ ಇಕ್ಬಾಲ್(45) ಮೃತಪಟ್ಟವರು.
ಒಂದೇ ಕುಟುಂಬದ 18 ಮಂದಿ ಸೋಮವಾರ ರಾತ್ರಿ ಊಟಿ ಮತ್ತಿತರ ಕಡೆ ಟೆಂಪೊ ಟ್ರಾವೆಲರ್ನಲ್ಲಿ ಪ್ರವಾಸಕ್ಕೆ ತೆರಳಿದ್ದರು. ಮೈಸೂರು ಜಿಲ್ಲೆಯ ಹುಣಸೂರಿನ ಕೊಳಘಟ್ಟ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂಜಾನೆ 4 ಗಂಟೆ ಸುಮಾರಿಗೆ ಇವರಿದ್ದ ಟೆಂಪೊ ಲಾರಿಯೊಂದರ ಹಿಂಬದಿಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟರೆ, 16 ಮಂದಿ ಗಾಯಗೊಂಡಿದ್ದಾರೆ.
ಘಟನೆಯ ಬಗ್ಗೆ ಹುಣಸೂರು ತಾಲೂಕಿನ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.