"ಭಾರತೀಯ ಶಾಲೆಗಳು ವಿಕಲಚೇತನಸ್ನೇಹಿಯಲ್ಲ"
ಕ್ಯಾಂಬ್ರಿಡ್ಜ್ ವಿಶ್ವವಿದ್ಯಾನಿಲಯ ವರದಿ
ಲಂಡನ್, ನ.15: ಶೈಕ್ಷಣಿಕ ಚೌಕಟ್ಟಿನಲ್ಲಿ ಅಂಗವಿಕಲರನ್ನು ಜೋಡಿಸಿಕೊಳ್ಳುವಲ್ಲಿ ಭಾರತ ವಿಶ್ವದಲ್ಲೇ ಗಣನೀಯ ಸಾಧನೆ ಮಾಡುತ್ತಿದ್ದು, ಹಲವು ರಾಜ್ಯಗಳಲ್ಲಿ ಅಂಗವಿಕಲರ ದಾಖಲಾತಿ ಹೆಚ್ಚುತ್ತಿದೆ. ಆದರೆ ಕ್ಯಾಂಬ್ರಿಡ್ಜ್ ವಿಶ್ವವಿದ್ಯಾನಿಲಯದ ವರದಿಯೊಂದರ ಪ್ರಕಾರ ಭಾರತೀಯ ಶಾಲೆಗಳು ವಿಕಲಚೇತನರನ್ನು ಪರಿಣಾಮಕಾರಿಯಾಗಿ ಶೈಕ್ಷಣಿಕ ಚೌಕಟ್ಟಿನಲ್ಲಿ ಸೇರಿಸಿಕೊಳ್ಳಲು ಸಮರ್ಪಕವಾಗಿ ಸಜ್ಜಾಗಿಲ್ಲ.
"ಅಂಗವಿಕಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ" ಎಂಬ ಶೀರ್ಷಿಕೆಯ ವರದಿಯನ್ನು ಕ್ಯಾಂಬ್ರಿಡ್ಜ್ ವಿವಿಯ ನಿಧಿ ಸಿಂಘಾಲ್ ಮತ್ತು ಹನ್ನಾ ವೇರ್ ಅವರು ದಿಲ್ಲಿ ವಿವಿಯ ಶ್ವೇತಾ ಖನ್ನಾ ಭೂತಾನಿ ಅವರ ಜತೆ ಸೇರಿ ಸಿದ್ಧಪಡಿಸಿದ್ದು, ಈ ವರದಿಯಲ್ಲಿ ಭಾರತದ ಶೈಕ್ಷಣಿಕ ಚೌಕಟ್ಟಿನ ಇತಿಮಿತಿಯನ್ನು ವಿವರಿಸಲಾಗಿದೆ.
ಭಾರತದಲ್ಲಿ ಮುಖ್ಯವಾಹಿನಿಯ ಪ್ರಾಥಮಿಕ ಶಾಲೆಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಅಂಗವಿಲಕರ ದಾಖಲಾತಿ ಶೇಕಡ 16ರಷ್ಟು ಹೆಚ್ಚಿದೆ. ಆದರೆ ಬಹುತೇಕ ಅಂಗವಿಕಲ ಮಕ್ಕಳು ಇನ್ನೂ ಶೈಕ್ಷಣಿಕ ಚೌಕಟ್ಟಿನಿಂದ ಹೊರಗಿದ್ದಾರೆ ಎಂದು ವರದಿ ಹೇಳಿದೆ. "ಐದು ವರ್ಷಗಳ ಪ್ರಾಥಮಿಕ ಶಿಕ್ಷಣ ಪೂರ್ಣಗೊಳ್ಳುವ ಮುನ್ನ ಅಥವಾ ಸೆಕೆಂಡರಿ ಇಲ್ಲವೇ ಉನ್ನತ ಶಿಕ್ಷಣಕ್ಕೆ ಸೇರುವ ಅವಧಿಯಲ್ಲಿ ಅರ್ಧದಿಂದ ಶಿಕ್ಷಣ ನಿಲ್ಲಿಸುವ ಸಾಧ್ಯತೆ ಅಧಿಕ" ಎಂದು ಕ್ಯಾಂಬ್ರಿಡ್ಜ್ ವಿವಿ ಶಿಕ್ಷಣ ವಿಷಯದ ರೀಡರ್ ಆಗಿರುವ ಸಿಂಘಾಲ್ ಹೇಳಿದ್ದಾರೆ.
ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿ ಹೊಂದಿದ ದೇಶಗಳು ಅಂಗವಿಕಲ ಮಕ್ಕಳಿಗೆ ಶಿಕ್ಷಣದ ಲಭ್ಯತೆ ಬಗ್ಗೆ ಗಮನಹರಿಸುವುದು ಮಾತ್ರವಲ್ಲದೇ, ಗುಣಮಟ್ಟದ ಶಿಕ್ಷಣದಿಂದ ಅವರಿಗೆ ಪ್ರಯೋಜನವಾಗುವಂತೆ ನೋಡಿಕೊಳ್ಳಬೇಕು" ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಶೇಷ ಅಗತ್ಯತೆಯ ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಹಲವು ನೀತಿನಿಯಮಗಳು ಜಾರಿಯಲ್ಲಿದ್ದರೂ, ದೊಡ್ಡ ಸಂಖ್ಯೆಯ ಅಂಗವಿಕಲ ಮಕ್ಕಳು ಇನ್ನೂ ಈ ವ್ಯವಸ್ಥೆಯಿಂದ ಹೊರಗುಳಿದಿದ್ದಾರೆ. ಅಂಗವಿಕಲ ಮಕ್ಕಳ ಪರಿಣಾಮಕಾರಿ ಶಿಕ್ಷಣಕ್ಕೆ ಮುಖ್ಯವಾಹಿನಿ ಶಿಕ್ಷಕರಿಗೆ ತರಬೇತಿ ನೀಡುವುದು, ವಿಶೇಷ ಶಿಕ್ಷಕರ ನೇಮಕಾತಿಗೆ ಒತ್ತು ನೀಡುವುದು, ಮಿತವೆಚ್ಚದ ಬೋಧನಾ ಪರಿಕರಗಳನ್ನು ಬಳಕೆ ಮಾಡುವುದು ಹಾಗೂ ಶಾಲಾ ಮೂಲಸೌಕರ್ಯ ಒದಗಿಸುವ ಮೂಲಕ ಅಂಗವಿಕಲ ಮಕ್ಕಳು ಮುಖ್ಯವಾಹಿನಿ ಶಾಲೆಗೆ ಬರುವಂತೆ ನೋಡಿಕೊಳ್ಳುವುದು ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.