ಕಳ್ಳತನ ಪ್ರಕರಣದ ಆರೋಪಿ ಬಾಲಕನಿಗೆ ಚಿತ್ರಹಿಂಸೆ ನೀಡಿದ ಪೊಲೀಸರು
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಉತ್ತರ ಪ್ರದೇಶ, ನ.18: ಕಳ್ಳತನ ಪ್ರಕರಣವೊಂದರ ಆರೋಪಿ ಬಾಲಕನೊಬ್ಬನಿಗೆ ಪೊಲೀಸರು ಚಿತ್ರಹಿಂಸೆ ನೀಡಿದ ಘಟನೆ ಉತ್ತರ ಪ್ರದೇಶದ ಮಹಾರಾಜ್ ಗಂಜ್ ನಲ್ಲಿ ನಡೆದಿದ್ದು, ಪೊಲೀಸರ ದೌರ್ಜನ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬಾಲಕ ಪರಿಪರಿಯಾಗಿ ಬೇಡಿಕೊಂಡರೂ ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ್ದಾರೆ. ಬಾಲಕನ ಕಾಲಿನ ಮೇಲೆ ಮರದ ತುಂಡೊಂದನ್ನು ಇಡುವ ಪೊಲೀಸರು ತುಂಡಿನ ಎರಡೂ ಕೊನೆಗಳಲ್ಲಿ ನಿಲ್ಲುತ್ತಾರೆ. ತನ್ನನ್ನು ಕ್ಷಮಿಸುವಂತೆ ಬಾಲಕ ಅಳುತ್ತಾ ಬೇಡಿದರೂ ಪೊಲೀಸರು ಇದಕ್ಕೆ ಕಿವಿಗೊಡದೆ ದೌರ್ಜನ್ಯ ನಡೆಸಿದ್ದಾರೆ.
ಇಷ್ಟೇ ಅಲ್ಲದೆ ಲಾಠಿಯಿಂದ ಯುವಕನಿಗೆ ಹಲ್ಲೆ ನಡೆಸುವ ಪೊಲೀಸ್ ಸಿಬ್ಬಂದಿಯೊಬ್ಬ ಅವಾಚ್ಯವಾಗಿ ನಿಂದಿಸುತ್ತಾನೆ ಹಾಗು ತುಳಿಯುತ್ತಾನೆ. ಈ ಘಟನೆ ಎಲ್ಲಿ ನಡೆದಿರುವುದು ಹಾಗು ಈ ವಿಡಿಯೋವನ್ನು ರೆಕಾರ್ಡ್ ಮಾಡಿದವರು ಯಾರು ಎನ್ನುವುದು ಇನ್ನೂ ಸ್ಪಷ್ಟಗೊಂಡಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಲೇ ವಿಡಿಯೋದಲ್ಲಿರುವ ಸಬ್ ಇನ್ ಸ್ಪೆಕ್ಟರ್ ಕೆ.ಎನ್. ಶಾಹಿ ಎಂಬವರನ್ನು ಅಮಾನತುಗೊಳಿಸಲಾಗಿದೆ.