ಚೆಸ್ ಆಟದಿಂದ ಬೌದ್ಧಿಕ ಶಕ್ತಿ ವೃದ್ಧಿ: ವಿನಯ ರಾಮಕೃಷ್ಣ
ರಾಷ್ಟ್ರೀಯ ಮಟ್ಟದ ಚೆಚ್ ಪಂದ್ಯಾವಳಿಗೆ ಚಾಲನೆ
ಮದ್ದೂರು, ನ.19: ಚೆಸ್ ಆಟವಾಡುವುದರಿಂದ ಮಕ್ಕಳ ಬೌದ್ಧಿಕ ಶಕ್ತಿ ವೃದ್ಧಿಸುತ್ತದೆ ಎಂದು ಆರ್.ಕೆ.ವಿದ್ಯಾಸಂಸ್ತೆಯ ವ್ಯವಸ್ಥಾಪಕ ನಿರ್ದೇಶಕ ವಿನಯ ರಾಮಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.
ಸಮೀಪದ ಕೆ.ಹೊನ್ನಲಗೆರೆ ಆರ್.ಕೆ.ವಿದ್ಯಾಸಂಸ್ಥೆ ಆವರಣದಲ್ಲಿ ಮಂಡ್ಯ ಚೆಸ್ ಆಕಾಡಮಿ ವತಿಯಿಂದ ಆಯೋಜಿಸಿರುವ 2ನೆ ರಾಷ್ಟ್ರೀಯಮಟ್ಟದ ಚೆಸ್ ಪಂದ್ಯಾವಳಿಗೆ ಶನಿವಾರ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕಳೆದ ಐದು ವರ್ಷಗಳಿಂದ ಗ್ರಾಮೀಣ ಭಾಗದ ಜನರಿಗೆ ಚೆಸ್ ಆಟ ಪರಿಚಯಿಸುವ ದಿಸೆಯಲ್ಲಿ ಪಂದ್ಯಾವಳಿ ಆಯೋಜಿಸಲಾಗುತ್ತಿದ್ದು, ಸ್ಪರ್ಧಿಗಳ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಎರಡು ವರ್ಷದಿಂದ ರಾಷ್ಟ್ರೀಯಮಟ್ಟದ ಪಂದ್ಯಾವಳಿ ನಡೆಸಿ ಸುಮಾರು 2 ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಕರ್ನಾಟಕದ ಗ್ರ್ಯಾಂಡ್ ಮಾಸ್ಟರ್ ತೇಜುಕುಮಾರ್ ಸೇರಿದಂತೆ ಸ್ಪರ್ಧೆಯಲ್ಲಿ 250ಕ್ಕೂ ಹೆಚ್ಚು ಸ್ಪರ್ಧಿಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದಾರೆ
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಡಾ.ಎಂ.ಸಿ.ಸತೀಶ್ಬಾಬು, ಶಿಕ್ಷಣ ಸಂಯೋಜನಾಧಿಕಾರಿ ಕೆ.ಎಸ್.ಮಹದೇವೇಗೌಡ, ಸಾರ್ವಜನಿಕ ಸಂಪರ್ಕಾಧಿಕಾರಿ ಎಂ.ಪಿ.ಲಕ್ಷ್ಮಿ, ಪ್ರಾಂಶುಪಾಲ ಸಿದ್ದೇಗೌಡ, ಮುಖ್ಯಶಿಕ್ಷಕರಾದ ರಮೇಶ್, ಡಿ.ಕಲ್ಯಾಣಿ ಹಾಜರಿದ್ದರು.