ಬಿಜೆಪಿ ಆಡಳಿತದಲ್ಲಿ ಗುಜರಾತ್ ಹಿಂದುಳಿದಿದೆಯೇ ಹೊರತು ಅಭಿವೃದ್ಧಿಯಾಗಿಲ್ಲ: ಚಿದಂಬರಂ
ಹೊಸದಿಲ್ಲಿ, ನ.19: ಗುಜರಾತ್ ಅಭಿವೃದ್ಧಿ ಮಾದರಿಯನ್ನು ತಳ್ಳಿಹಾಕಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ರಾಜ್ಯದಲ್ಲಿ 22 ವರ್ಷಗಳ ಹಿಂದೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ನಿಜವಾಗಿಯೂ ಹಿಂದುಳಿದಿದೆಯೇ ಹೊರತು ಅಭಿವೃದ್ಧಿಯಾಗಿಲ್ಲ ಎಂದು ಹೇಳಿದ್ದಾರೆ.
ಇತರ ನಾಲ್ಕು ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಮಹಾರಾಷ್ಟ್ರಗಳ ಅಭಿವೃದ್ಧಿ ಅಂಕಿ-ಅಂಶವನ್ನು ಗುಜರಾತ್ಗೆ ಹೋಲಿಸಿರುವ ಕಾಂಗ್ರೆಸ್ ನಾಯಕ ತನ್ನ ವಾದವನ್ನು ಮುಂದಿಟ್ಟಿದ್ದಾರೆ.
‘‘ಗುಜರಾತ್ನಷ್ಟೇ ಭೌಗೋಳಿಕ ವಿನ್ಯಾಸ ಹೊಂದಿರುವ ನಾಲ್ಕು ರಾಜ್ಯಗಳ ಅಭಿವೃದ್ಧಿ ಹಾಗೂ ಗುಜರಾತ್ನ ಅಭಿವೃದ್ಧಿಯ ಪಟ್ಟಿಯು ಎಲ್ಲವನ್ನೂ ಹೇಳುತ್ತಿದೆ. ಇತರ ನಾಲ್ಕು ರಾಜ್ಯಗಳಿಗೆ ಹೋಲಿಸಿದರೆ ಗುಜರಾತ್ ಅಭಿವೃದ್ಧಿಯಾಗಿಲ್ಲ. ಗುಜರಾತ್ ಕೈಗಾರಿಕೆ ಕ್ಷೇತ್ರದಲ್ಲಿ ಪ್ರಗತಿಯಾಗಿದೆ. ಆದರೆ, ಕಳೆದ 22 ವರ್ಷಗಳಲ್ಲಿ ಮಾನವ ಅಭಿವೃದ್ಧಿಯ ಮಹತ್ವಪೂರ್ಣ ವಿಷಯದಲ್ಲಿ ತೀರಾ ಹಿಂದುಳಿದಿದೆ’’ ಎಂದರು.
1995ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲೇ ಗುಜರಾತ್ ಅಭಿವೃದ್ಧಿ ದರ ರಾಷ್ಟ್ರಮಟ್ಟದ ಸರಾಸರಿಗಿಂತಲೂ ಹೆಚ್ಚಿತ್ತು. ಅಮುಲ್, ಪೋರ್ಟ್ಸ್, ದಿ ವಿಬ್ರೆಂಟ್ ಟೆಕ್ಸ್ಟೈಲ್ ಉದ್ಯಮ ಹಾಗೂ ಕೆಮಿಕಲ್ ಹಾಗೂ ಪೆಟ್ರೊಕೆಮಿಕಲ್ ಕೈಗಾರಿಕೆ 1995ರ ಮೊದಲೇ ಗುಜರಾತ್ನಲ್ಲಿದ್ದವು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಾಮಾಜಿಕ-ಆರ್ಥಿಕ ನೈಜತೆ ಹಾಗೂ ಪ್ರಚಾರಕ್ಕಾಗಿ ಘೋಷಣೆ, ಕಳಪೆ ಮಾನವ ಅಭಿವೃದ್ಧಿ ಸೂಚ್ಯಂಕ ಹಾಗೂ ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆ ಪ್ರಸ್ತಾವಗಳು ನಡುವಿನ ಸಂಘರ್ಷವಾಗಲಿದೆ ಎಂದು ಚಿದಂಬರಂ ಹೇಳಿದ್ದಾರೆ.