ದೀಪಿಕಾರ ತಲೆಯನ್ನು... ರಕ್ಷಿಸಲು ಬಯಸುತ್ತೇನೆ: ಕಮಲ್ ಹಾಸನ್
ಹೊಸದಿಲ್ಲಿ, ನ.21: ಪದ್ಮಾವತಿ ವಿವಾದದ ಬಗ್ಗೆ ಕೊನೆಗೂ ನಟ, ನಿರ್ದೇಶಕ ಕಮಲ್ ಹಾಸನ್ ಮೌನ ಮುರಿದಿದ್ದು, ತಾನು ದೀಪಿಕಾ ಪಡುಕೋಣೆಯ ‘ತಲೆಯನ್ನು ಉಳಿಸಲು ಬಯಸುತ್ತೇನೆ ಎಂದಿದ್ದಾರೆ.
ನಟಿ ದೀಪಿಕಾ ಪಡುಕೋಣೆಯವರ ತಲೆಗೆ 10 ಕೋಟಿ ರೂ. ಘೋಷಿಸಿದ್ದ ಬಿಜೆಪಿ ನಾಯಕರೊಬ್ಬರ ಹೇಳಿಕೆಗೆ ಕಮಲ್ ಹಾಸನ್ ಈ ಪ್ರತಿಕ್ರಿಯೆ ನೀಡಿದ್ದಾರೆ.
“ನಾನು ದೀಪಿಕಾರ ತಲೆಯನ್ನು …. ರಕ್ಷಿಸಲು ಬಯಸುತ್ತೇನೆ. ಅವರ ದೇಹಕ್ಕಿಂತಲೂ ಅದನ್ನು ಹೆಚ್ಚು ಗೌರವಿಸಿ. ಅವರ ಸ್ವಾತಂತ್ರ್ಯವನ್ನು ಇನ್ನೂ ಗೌರವಿಸಿ. ನನ್ನ ಚಿತ್ರಕ್ಕೂ ಹಲವು ಸಮುದಾಯಗಳು ವಿರೋಧ ವ್ಯಕ್ತಪಡಿಸಿತ್ತು” ಎಂದು ಕಮಲ್ ಟ್ವೀಟ್ ಮಾಡಿದ್ದಾರೆ.
ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಶಾಹಿದ್ ಕಪೂರ್ ಮುಖ್ಯಭೂಮಿಕೆಯ ಚಿತ್ರ ಪದ್ಮಾವತಿಗೆ ರಜಪೂತರು ಸೇರಿದಂತೆ ವಿವಿಧ ಗುಂಪುಗಳು ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ. ಇಷ್ಟೇ ಅಲ್ಲದೆ ಕೆಲ ಗುಂಪುಗಳ ನಾಯಕರು ದೀಪಿಕಾ ಹಾಗು ಭನ್ಸಾಲಿ ತಲೆಗೆ, ದೀಪಿಕಾರನ್ನು ಜೀವಂತ ಸುಟ್ಟವರಿಗೆ ಬಹುಮಾನ ನೀಡಲಾಗುವುದು ಎಂದು ಘೋಷಿಸಿದ್ದಾರೆ.