ಗೋಡ್ಸೆ ಪ್ರತಿಮೆಯನ್ನು ವಶಕ್ಕೆ ಪಡೆದುಕೊಂಡ ಪೊಲೀಸರು
ಹಿಂದೂ ಮಹಾಸಭಾ ಕಚೇರಿಗೆ ಬೀಗ
ಗ್ವಾಲಿಯರ್, ನ.21: ಅಖಿಲ ಭಾರತೀಯ ಹಿಂದೂ ಮಹಾಸಭಾ ತನ್ನ ಗ್ವಾಲಿರ್ನಲ್ಲಿರುವ ಕಚೇರಿಯಲ್ಲಿ ಪ್ರತಿಷ್ಠಾಪಿಸಿದ್ದ ನಾಥೂರಾಂ ಗೋಡ್ಸೆಯ ಪ್ರತಿಮೆಯನ್ನು ಮಧ್ಯಪ್ರದೇಶ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಕಚೇರಿಗೆ ಬೀಗ ಜಡಿದಿದ್ದಾರೆ. ಸ್ಥಳದಲ್ಲಿ ಪೊಲೀಸ್ ತಂಡವನ್ನು ನಿಯೋಜಿಸಲಾಗಿದೆ. ನವೆಂಬರ್ 15ರಂದು ಗೋಡ್ಸೆ ಸಾವನ್ನಪ್ಪಿ 68ವರ್ಷಗಳಾದ ಪ್ರಯುಕ್ತ ಹಿಂದೂ ಮಹಾಸಭಾ ತನ್ನ ಕಚೇರಿಯಲ್ಲಿ ಆತನ ಪ್ರತಿಮೆಯನ್ನು ಪ್ರತಿಷ್ಠಾಪಿಸಿತ್ತು. ಇದಕ್ಕೂ ಮೊದಲು ಮಹಾಸಭಾವು ಗಾಂಧಿ ಹಂತಕನ ದೇವಾಲಯವನ್ನು ಸ್ಥಾಪಿಸಲು ಜಮೀನು ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು. ಆದರೆ ಈ ಮನವಿಯನ್ನು ಜಿಲ್ಲಾಡಳಿತ ತಳ್ಳಿಹಾಕಿತ್ತು.
ಈ ಕುರಿತು ಮಾತನಾಡಿದ್ದ ಹಿಂದೂ ಮಹಾಸಭಾದ ಉಪಾಧ್ಯಕ್ಷ ನಾರಾಯಣ ಶರ್ಮಾ, ಸರಕಾರ ನಮಗೆ ಜಮೀನು ನೀಡಲು ನಿರಾಕರಿಸಿದ ಕಾರಣ ನಾವು ನಮ್ಮ ಖಾಸಗಿ ಜಮೀನಿನಲ್ಲೇ ಗೋಡ್ಸೆಗಾಗಿ ಮಂದಿರ ಸ್ಥಾಪಿಸಿರುವುದಾಗಿ ಹೇಳಿಕೊಂಡಿದ್ದ. ಪ್ರತಿಮೆ ಸ್ಥಾಪಿಸಲು ನಾಲ್ಕು ರಾಜಕೀಯ ಪಕ್ಷಗಳು ಕೂಡಾ ನಮಗೆ ಸಹಾಯ ಮಾಡಿದ್ದವು ಎಂದು ಹೇಳಿಕೊಂಡಿದ್ದ ಶರ್ಮಾ ಖಾಸಗಿ ಜಾಗದಲ್ಲಿ ಮಂದಿರ ನಿರ್ಮಾಣ ಮಾಡಿರುವುದರಿಂದ ಯಾರೂ ಕೂಡಾ ಅದನ್ನು ಬದಲಾಯಿಸಲು ಅಥವಾ ಮುಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದ್ದ.