ನಿಷ್ಪ್ರಯೋಜಕವಾದ ಮಸೂದೆ
ಮಾನ್ಯರೇ,
ಸರಕಾರವು ವೈದ್ಯರಿಗೆ ಬರೆ ಎಳೆಯುವಂತೆ ವರ್ತಿಸಿ ಕೊನೆಗೆ ರೋಗಿಗಳ ಗಾಯದ ಮೇಲೆ ಬರೆ ಎಳೆದಿರುವುದು ವಿಷಾದನೀಯ. ಸರಕಾರ ಮತ್ತು ಖಾಸಗಿ ವೈದ್ಯರು ಒಟ್ಟಾಗಿ ಈ ನಿಷ್ಪ್ರಯೋಜಕ ಮಸೂದೆಯನ್ನು ರೂಪಿಸಲು 35ಕ್ಕೂ ಹೆಚ್ಚು ಮಂದಿಯ ಪ್ರಾಣದ ಜೊತೆ ಆಟವಾಡಬೇಕಿತ್ತೆ?. ಭಾರತದಲ್ಲಿ ಸುಮಾರು 2,644 ಮಂದಿ ವೈದ್ಯಕೀಯ ಪ್ರಯೋಗದಿಂದ ಮೃತರಾಗಿದ್ದಾರೆೆ. ಇಂತಹ ಸಂದರ್ಭದಲ್ಲಿ ಅಜಾಗರೂಕ ವೈದ್ಯರನ್ನು ಕಾನೂನಿನ ಚೌಕಟ್ಟಿಗೆ ಒಳಪಡಿಸುವುದನ್ನು ಬಿಟ್ಟು ಸುಳ್ಳು ಮಾಹಿತಿಯನ್ನು ನೀಡುವ ರೋಗಿಗಳನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಹೇಳಿರುವುದು ಈ ವಿಧೇಯಕದ ವೈಫಲ್ಯವನ್ನು ಎತ್ತಿಹಿಡಿದಿದೆ. ಅಲ್ಲದೆ ವೈದ್ಯಕೀಯ ಚಿಕಿತ್ಸೆಯ ನಿರ್ಲಕ್ಷ್ಯದ ಪ್ರಕರಣಗಳನ್ನು ಮೆಡಿಕಲ್ ಕೌನ್ಸಿಲ್ಗೆ ವರ್ಗಾಯಿಸಿದೆ. ಇದು ಖಜಾನೆಯನ್ನು ಕಾಯಲು ಕಳ್ಳನನ್ನು ನೇಮಿಸಿದಂತಹ ಐತಿಹ್ಯವನ್ನು ನೆನಪಿಸುತ್ತದೆ. ಇಂದು ಸಮಾಜದಲ್ಲಿ ಔಷಧಿಗಳ ದಂಧೆ ಮೇರೆಯಿಲ್ಲದೆ ನಡೆಯುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸುಮಾರು ಶೇ. 18ಕ್ಕಿಂತ ಅಧಿಕ ವೈದ್ಯರು ವೈದ್ಯ ಪದವಿಯನ್ನೇ ಹೊಂದಿಲ್ಲ ಹಾಗೂ ಭಾರತದಲ್ಲಿ ಮಾರಾಟವಾಗುತ್ತಿರುವ ಬಹುಪಾಲು ಔಷಧಿಗಳು ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತೆಯನ್ನೇ ಹೊಂದಿಲ್ಲ ಎಂಬುದು ತುಂಬಾ ವಿಷಾದನೀಯ ಸಂಗತಿ. ಇದಲ್ಲದೆ ಭಾರತದಲ್ಲಿ ಮಾರಾಟವಾಗುವ ಬಹುಪಾಲು ಔಷಧಿಗಳು ಬೇರೆ ದೇಶಗಳಲ್ಲಿ ತಿರಸ್ಕರಿಸಲ್ಪಟ್ಟವು. ಭಾರತದಲ್ಲಿನ ಪ್ರತಿಷ್ಠಿತ 18 ಕಂಪೆನಿಗಳು ಉತ್ಪಾದಿಸುವ 27ಕ್ಕೂ ಅಧಿಕ ಔಷಧಿಗಳು ಕಡಿಮೆ ಗುಣಮಟ್ಟದವುಗಳೆಂದು ಭಾರತೀಯ ಡ್ರಗ್ ರೆಗ್ಯುಲೇಟ್ ಆಪಾದಿಸಿದೆ. ಸರಕಾರವು ಜನರಿಗೆ ಒದಗಿಸಬೇಕಾದ ನೀರು, ವಿದ್ಯುತ್, ಭೂಮಿ ಇನ್ನಿತರ ಸವಲತ್ತುಗಳನ್ನು ಕಸಿದು ಖಾಸಗಿ ಆಸ್ಪತ್ರೆಗಳನ್ನು ತೆರೆಯಲು ಅವಕಾಶ ನೀಡಿ ಜನಸಾಮಾನ್ಯರ ಮೇಲೆ ದಬ್ಬಾಳಿಕೆ ನೆಡೆಸಲು ಅನುವುಮಾಡಿಕೊಟ್ಟಿದೆ. ಇದಕ್ಕೆ ಪೂರಕವಾಗಿ ಸರಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳ ಜೊತೆಗೂಡಿ ದೊಡ್ಡ ವ್ಯಾಪಾರವನ್ನೇ ನಡೆಸುತ್ತಾರೆ. ಇಂತಹ ಎಲ್ಲಾ ಲೋಪಗಳನ್ನು ಬಗ್ಗುಬಡಿಯಲು ಉಪಯುಕ್ತವಾಗಿದ್ದ ಕೆ.ಪಿ.ಎಮ್.ಇ ವಿಧೇಯಕವನ್ನು ತಿದ್ದುಪಡಿ ಮಾಡುವ ಮೂಲಕ ಅದನ್ನು ನಿಷ್ಪ್ರಯೋಜಕಗೊಳಿಸಿರುವುದು ಬಡಜನರ ಬದುಕಿಗೆ ಬೆಂಕಿಯಿಟ್ಟಂತಾಗಿದೆ.
-ಶ್ರೀನಿವಾಸ್ ಕೆ., ಬೆಂಗಳೂರು