ಶ್ರೀಗಳು ಬದಲಾಗಬೇಕು
ಕವನ
ಶ್ರೀ ಶ್ರೀ ಶ್ರೀಗಳ ತೊದಲು ಮಾತಿದು
ಸಂವಿಧಾನ ಬದಲಾಗಬೇಕು
ಕೇಳಿಲ್ಲಿ ಶ್ರೀಗಳೇ....
ದಲಿತ ಶೂದ್ರರ ಮೆದುಳು
ನಿಮ್ಮ ಅಂಗೈಯಲ್ಲಿರುವಾಗ
ಇನ್ನೇನು ಬದಲಾವಣೆ ಬೇಕು ನಿಮಗೆ?
ಉರುಳಿಸಿದ ಆ ದಿನ
ಕಟ್ಟಲಿರುವ ಈ ದಿನ
ಎಲ್ಲಾ ಸಕಾಲ ನಿಮಗೆ
ಇನ್ನೇನು ಬದಲಾವಣೆ ನಿಮಗೆ ಬೇಕು?
ರೆಂಬೆ ಕೊಂಬೆಗಳಲಿ
ನಿಮ್ಮ ದಾಂಡಿಗರೆ ತುಂಬಿರುವಾಗ
ಇನ್ನೇನು ಮೀಸಲಾತಿ ಬೇಕು ನಿಮಗೆ?
ಚಿಗುರು ಎಲೆಗಳ ಬಣ್ಣ
ಬದಲಾಗುತ್ತಿದೆ ನೋಡಿ
ಇನ್ನೇನು ಬದಲಾವಣೆ ಬೇಕು ನಿಮಗೆ?
ಎಲ್ಲೆಗಳ ದಾಟಿ ಉಲಿಯುವ ಶುಕಗಳ
ಸೀಳಿದ ಬಾಣವು ನಿಮ್ಮಳಗೆ ಇರುವಾಗ
ಇನ್ನೇನು ಬದಲಾವಣೆ ನಿಮಗೆ ಬೇಕು?
ಹಸಿವು, ಅನ್ನದ ನಡುವೆ
ಜಾತಿ ವಿಷ ಬೆರೆಸಿರುವ
ನೀವು ಬದಲಾಗಬೇಕು
ಕುರುಬ ಕನಕನಿಗಾಗಿ
ಮಂದಿರದ ಬಾಗಿಲನಲ್ಲ
ತಮ್ಮ ಮನದ ಬಾಗಿಲ ತೆರೆಯಬೇಕು
ಈ ಇಳಿಸಂಜೆಯಲಿ
ನೀವು ಬದಲಾಗಬೇಕು.
Next Story