ಹೆಣದ ಮುಂದೆ ಹಣಕ್ಕಾಗಿ ಕೈಚಾಚುವ ವೈದ್ಯರು ರಾಕ್ಷಸರು: ರಮೇಶ್ ಕುಮಾರ್
ಕೋಲಾರ, ಡಿ.6: ಖಾಸಗಿ ಆಸ್ಪತ್ರೆಗಳಲ್ಲಿ ಪ್ರೀತಿ ಪಾತ್ರರು ಸತ್ತಾಗ ಹೆಣ ಬಿಡಿಸಿಕೊಳ್ಳಲು ಬಡವರು ಆತಂಕ ಪಡುವ ಪರಿಸ್ಥಿತಿ ಪ್ರಸಕ್ತ ನಿರ್ಮಾಣವಾಗಿದೆ. ಆದರೆ ಹಣ ನೀಡದೆ ಹೆಣ ನೀಡುವುದಿಲ್ಲ ಎನ್ನುವ ವೈದ್ಯರು ರಾಕ್ಷಸರಿಗೆ ಸಮಾನ. ರೋಗಿಗಳನ್ನು ಶೋಷಣೆ ವಾಡುವ ಖಾಸಗಿ ವೈದ್ಯರನ್ನು ನಿಯಂತ್ರಣ ಮಾಡಲು ಕಾಯ್ದೆಗೆ ಸರಕಾರ ತಿದ್ದುಪಡಿ ಮಾಡಲು ಹೊರಟಾಗ ವಿಧಾನಸಭೆಯಲ್ಲಿ ಕಾಯ್ದೆಯನ್ನು ಮಂಡಿಸುವ ಮೊದಲೇ ಕೆಲ ವೈದ್ಯರು ತನ್ನ ವಿರುದ್ಧ ಪ್ರತಿಭಟನೆ ನಡೆಸಿದರು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ರಮೇಶ್ ಕುಮಾರ್ ಖಾಸಗಿ ವೈದ್ಯರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು ಉತ್ತರ ವಿವಿ ಸ್ನಾತಕೋತ್ತರ ಕೇಂದ್ರದಲ್ಲಿ ಬುಧವಾರ ನಡೆದ ಱಜನರ ಆರೋಗ್ಯದ ಬಿಕ್ಕಟ್ಟು ಮತ್ತು ಆರೋಗ್ಯ ಹಕ್ಕಿನ ಪರಿಭಾಷೆಯ ವಿಭಿನ್ನ ಆಯಾಮೞಎಂಬ ವಿಷಯದ ಬಗ್ಗೆ ನಡೆದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಬಡ ಜನತೆ ಸಾಲ ಮಾಡಿ ಪ್ರೀತಿ ಪಾತ್ರರನ್ನು ಆಸ್ಪತ್ರೆಗೆ ದಾಖಲು ಮಾಡುತ್ತಾರೆ. ಆ ವೇಳೆಗೆ ತಲೆಯ ಮೇಲೆ ಸಾಲದ ಹೊರೆ ಇರುತ್ತದೆ. ಎಷ್ಟೋ ಆಸೆಯಿಂದ ಬದುಕಿಸಬೇಕು ಎಂಬ ಉದ್ದೇಶದಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿರುತ್ತದೆ. ಆದರೆ ಪ್ರೀತಿಸುವ ಜೀವ ಹೋಗಿರುತ್ತದೆ. ಪ್ರೀತಿ ಪಾತ್ರರನ್ನು ಬದುಕಿಸಲಾಗದೆ ಆತಂಕದಲ್ಲಿರುವಾಗ ಹಣಕಟ್ಟಿ ಹೆಣ ತೆಗೆದುಕೊಂಡು ಹೋಗಿ ಎಂದು ವೈದ್ಯರು ರಾಕ್ಷಸಿ ಪ್ರವೃತ್ತಿಯಿಂದ ವರ್ತಿಸುತ್ತಾರೆ. ಜನರನ್ನು ಒತ್ತೆ ಇಟ್ಟುಕೊಂಡು ಆತಂಕ ಉಂಟು ಮಾಡುವವರನ್ನು ಭಯೋತ್ಪಾದಕರು ಎನ್ನಲಾಗುತ್ತದೆ. ಆದರೆ ಸತ್ತ ಹೆಣವನ್ನು ಒತ್ತೆ ಇಟ್ಟುಕೊಂಡು ಹಣಕ್ಕಾಗಿ ಪೀಡಿಸುವ ವೈದ್ಯರನ್ನು ಯಾವ ರೀತಿ ಕರೆಯಬೇಕೆಂದು ವ್ಯಂಗವಾಡಿದರು.
ಖಾಸಗಿ ವೈದ್ಯರು ನಡೆಸುವ ಇಂತಹ ಶೋಷಣೆಯನ್ನು ತಪ್ಪಿಸಲು ಕಾಯ್ದೆಗೆ ತಿದ್ದುಪಡಿ ತರಲಾಯಿತು. ವಿಧಾನಸಭೆಯಲ್ಲಿ ಕಾಯ್ದೆಯನ್ನು ಮಂಡಿಸುವ ಮೊದಲೇ ಸಂಪೂರ್ಣ ಮಾಹಿತಿ ಪಡೆಯದ ವೈದ್ಯರು ಬೀದಿಗಿಳಿದು ಹೋರಾಟ ನಡೆಸಿದರು ಎಂದು ಬೇಸರ ವ್ಯಕ್ತಪಡಿಸಿದ ಅವರು, ನನಗೆ ಮತ್ತು ಸರಕಾರಕ್ಕೆ ಜನಸಾಮಾನ್ಯರ ಹಿತ ಮುಖ್ಯ ಎಂದು ಕಾಯ್ದೆಯ ತಿದ್ದಿಪಡಿಯನ್ನು ಸಮರ್ಥಿಸಿಕೊಂಡರು. ಇದೇ ಸಂದರ್ಭದಲ್ಲಿ ಡಾ.ಅಂಬೇಡ್ಕರ್ ಭಾವ ಚಿತ್ರಕ್ಕೆ ರಮೇಶ್ ಕುಮಾರ್ ಪುಷ್ಪನಮನ ಸಲ್ಲಿಸಿದರು. ವಿಚಾರ ಸಂಕರಣಲ್ಲಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಡಾಮಿನಿಕ್, ಬೆಂಗಳೂರು ಉತ್ತರ ವಿವಿ ರಿಜಿಸ್ಟ್ರಾರ್ ಡಾ.ಎಂ.ಎನ್.ರೆಡ್ಡಿ, ಡಾ.ಪಾರ್ವತಿ ಹಾಗೂ ಡಾ.ಕುಮುದಾ ಮಾತನಾಡಿದರು.