ಬದಿಯಡ್ಕ: ವಾಹನ ಅಪಘಾತದಿಂದ ಯುವಕ ಮೃತ್ಯು; ಇಬ್ಬರಿಗೆ ಗಂಭೀರ ಗಾಯ
ಕಾಸರಗೋಡು, ಡಿ.7: ಎರಡು ಬೈಕ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವಕ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಬುಧವಾರ ರಾತ್ರಿ ಬದಿಯಡ್ಕ ಸಮೀಪದ ಮುಂಡ್ಯತ್ತಡ್ಕ ಗುಣಾಜೆ ಎಂಬಲ್ಲಿ ನಡೆದಿದೆ.
ಮೃತಪಟ್ಟವರನ್ನು ಕಾಸರಗೋಡು ಚೂರಿ ನೂರುಲ್ ಹುದಾ ಮಸೀದಿಯ ಇಮಾಂ, ಮುಂಡ್ಯತ್ತಡ್ಕ ಸಮೀಪದ ವಂಬತ್ತಡುಕ್ಕ ನಿವಾಸಿ ಅಬ್ಬಾಸ್ ಮುಸ್ಲಿಯಾರ್ ಎಂಬವರ ಪುತ್ರ ಮುಹಮ್ಮದ್ ಮಿದ್ಲಾಜ್(18) ಎಂದು ಗುರುತಿಸಲಾಗಿದೆ.
ಬುಧವಾರ ರಾತ್ರಿ 9 ಘಂಟೆ ಸುಮಾರಿಗೆ ಬದಿಯಡ್ಕ ಸಮೀಪದ ಮುಂಡ್ಯತ್ತಡ್ಕದ ಪಳ್ಳಂ ಗುಣಾಜೆ ರಸ್ತೆಯಲ್ಲಿ ಅಪಘಾಯ ಸಂಭವಿಸಿದೆ. ಮುಂಡ್ಯತ್ತಡ್ಕ ಮಸೀದಿಯಿಂದ ಮನೆಗೆ ತೆರಳುತ್ತಿದ್ದಾಗ ಮಿದ್ಲಾಜ್ ಸಂಚರಿಸುತ್ತಿದ್ದ ಬೈಕ್ ಮತ್ತು ಇನ್ನೊಂದು ಬೈಕ್ ನಡುವೆ ಈ ಅಪಘಾತವಾಗಿದೆ.
ಗಂಭೀರ ಗಾಯಗೊಂಡಿದ್ದ ಮಿದ್ಲಾಜ್ ರನ್ನು ನಾಗರಿಕರು ತಕ್ಷಣ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ಅಪಘಾತದಿಂದ ಇನ್ನೊಂದು ಬೈಕ್ ನಲ್ಲಿದ್ದ ಮುಂಡ್ಯತ್ತಡ್ಕದ ಅವಿನಾಶ್ ಮತ್ತು ಮುತ್ತು ಎಂಬವರು ಗಂಭೀರ ಗಾಯಗೊಂಡಿದ್ದು, ಅವಿನಾಶ್ ನನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಮತ್ತು ಮುತ್ತು ಅವರನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಿದ್ಲಾಜ್ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡಲಿದೆ. ಈ ಬಗ್ಗೆ ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.