ದಿಲ್ಲಿಯ ಜಾಮಾ ಮಸೀದಿ ಜಮುನಾ ದೇವಿ ದೇವಸ್ಥಾನವಾಗಿತ್ತು ಎಂದ ಬಿಜೆಪಿ ಸಂಸದ!
ಹೊಸದಿಲ್ಲಿ, ಡಿ.7: ಆಗ್ರಾದ ತಾಜ್ ಮಹಲ್ ಒಂದು ಕಾಲದಲ್ಲಿ ಹಿಂದೂ ದೇವಸ್ಥಾನವಾಗಿತ್ತು ಎಂದು ಈ ಹಿಂದೆ ಹೇಳಿಕೆ ನೀಡಿ ನಗೆಪಾಟಲಿಗೀಡಾಗಿದ್ದ ಬಿಜೆಪಿ ಸಂಸದ ವಿನಯ್ ಕಟಿಯಾರ್ ಇದೀಗ ದಿಲ್ಲಿಯ ಜಾಮಾ ಮಸೀದಿ 'ಜಮುನಾ ದೇವಿ ದೇವಸ್ಥಾನ'ವಾಗಿತ್ತು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಮೊಘಲರ ಆಡಳಿತಕ್ಕಿಂತ ಮುಂಚೆ ಜಾಮಾ ಮಸೀದಿ 'ಜಮುನಾ ದೇವಿ ದೇವಸ್ಥಾನ'ವಾಗಿತ್ತು. ಈ 17ನೇ ಶತಮಾನದ ಮಸೀದಿಯ ನಿರ್ಮಾಣಕ್ಕೆ ತಾಜ್ ಮಹಲ್ ಮತ್ತು ಕೆಂಪು ಕೋಟೆ ನಿರ್ಮಿಸಿದ್ದ ಶಹಜಹಾನ್ ಕಾರಣನಾಗಿದ್ದ. ಮೊಘಲ್ ಅರಸರು ನಾಶಗೈದ ಸುಮಾರು 6,000 ಸ್ಥಳಗಳಿವೆ. ದಿಲ್ಲಿಯ ಜಾಮಾ ಮಸೀದಿ ಮೂಲತಃ ಜಮುನಾ ದೇವಿ ದೇವಸ್ಥಾನವಾಗಿದ್ದರೆ, ತಾಜ್ ಮಹಲ್ ತೇಜೋ ಮಹಾಲಯವಾಗಿತ್ತು'' ಎಂದು ಕಟಿಯಾರ್ ಹೇಳಿದ್ದಾರೆ.
ಉತ್ತರ ಪ್ರದೇಶ ಸರಕಾರ ತನ್ನ ಪ್ರವಾಸೋದ್ಯಮ ಕೈಪಿಡಿಯಿಂದ ತಾಜ್ ಮಹಲ್ ಅನ್ನು ಕೈಬಿಟ್ಟಿದ್ದಾಗ ಅದೊಂದು ಹಿಂದೂ ದೇವಾಲಯ ಹಾಗೂ ಅಲ್ಲಿ ಶಿವನ ಮೂರ್ತಿಯಿತ್ತು ಎಂದು ಕಟಿಯಾರ್ ಹೇಳಿದ್ದರು. ಅಯೋಧ್ಯೆ ವಿವಾದದ ಬಗ್ಗೆ ಚರ್ಚೆಗಳು ನಡೆಯುತ್ತಿರುವ ನಡುವೆಯೇ ಇದೀಗ ಕಟಿಯಾರ್ ಅವರ ವಿವಾದಾತ್ಮಕ ಹೇಳಿಕೆ ಬಂದಿದೆ.