ಆಸ್ತಿ ವಿಚಾರಕ್ಕೆ ಕಲಹ: ವಾಹನಗಳಿಗೆ ಬೆಂಕಿ
ಸಿದ್ದಾಪುರ(ಕೊಡಗು), ನ.7: ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಕಲಹದಲ್ಲಿ ಕಾರುಗಳಿಗೆ ಬೆಂಕಿ ಹಚ್ಚಿ ಆರೋಪಿ ಪರಾರಿಯಾಗಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಸಮೀಪದ ಆನಂದಪುರದ ಕಾಫಿ ತೋಟದಲ್ಲಿ ನಡೆದಿದೆ.
ಚಿಟ್ಟಿಯಪ್ಪ ಮತ್ತು ಆತನ ಅಣ್ಣ ವಿಶ್ವನಾಥ್ ಎಂಬವರ ತಾಯಿಗೆ ಸೇರಿದ ಕಾಫಿ ತೋಟವಿದ್ದು, ಈ ಆಸ್ತಿಯ ವಿವಾದ ನ್ಯಾಯಾಲಯದಲ್ಲಿದೆ. ಗುರುವಾರ ಬೆಳಗ್ಗೆ ಚಿಟ್ಟಿಯಪ್ಪ ಕಾಫಿ ಕುಯ್ಯಲು ಮುಂದಾಗಿದ್ದಾರೆ ಈ ಸಂದರ್ಭ ಸ್ಥಳಕ್ಕೆ ತೆರಳಿದ ಅಣ್ಣ ವಿಶ್ವನಾಥ್ ಮತ್ತು ಅವರ ಬಾವ ರಮೇಶ್ ಎಂಬುವವರು ಕಾಫಿ ಕುಯ್ಯದಂತೆ ಚಿಟ್ಟಿಯಪ್ಪನನ್ನು ತಡೆದು ಕಳುಹಿಸಿದ್ದಾರೆ ಎನ್ನಲಾಗಿದೆ.
ಕೋಪಗೊಂಡ ಚಿಟ್ಟಿಯಪ್ಪ, ಅಮ್ಮತ್ತಿ ಪಟ್ಟಣದಿಂದ ಪೆಟ್ರೋಲ್ ತಂದು ಅಣ್ಣ ಮತ್ತು ಬಾವನಿಗೆ ಸೇರಿದ ಒಮಿನಿ ವ್ಯಾನ್ ಮತ್ತು ಥಾರ್ ಜೀಪುಗಳಿಗೆ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾರೆ. ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಕಂಡ ರಮೆಶ್ ಕೂಡಲೇ ಅಗ್ನಿ ಶಾಮಕ ದಳಕ್ಕೆ ಮಾಹಿತಿ ತಿಳಿಸಲಾಗಿ ಬೆಂಕಿ ನಂದಿಸಲಾಗಿದೆ. ವಿರಾಜಪೆಟೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಬಳಿಕ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.