ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಎಫ್ಐಆರ್ ಪ್ರತಿ ವೆಬ್ಸೈಟ್ಗೆ ಅಪ್ಲೊಡ್ ಪ್ರಕರಣ
ಬೆಂಗಳೂರು, ಡಿ.8: ಸುಪ್ರೀಂಕೋರ್ಟ್ ಆದೇಶವಿದ್ದರೂ ಬಿಎಂಟಿಎಫ್ ಹಾಗೂ ಎಸಿಬಿ ಅವರು ಎಫ್ಐಆರ್ ಪ್ರತಿಯನ್ನು ವೆಬ್ಸೈಟ್ಗೆ ಅಪ್ಲೌಡ್ ಮಾಡದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಈ ಸಂಬಂಧ ವಕೀಲರೂ ಆಗಿರುವ ಎಸ್.ಉಮಾಪತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ನಡೆಸಿದ ಹಂಗಾಮಿ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು.
ಅರ್ಜಿದಾರ ವಕೀಲ ಎಸ್.ಉಮಾಪತಿ ಅವರು ವಾದಿಸಿ, ಎಫ್ಐಆರ್ ದಾಖಲಾದ 24 ಗಂಟೆಯೊಳಗೆ ಆ ಎಫ್ಐಆರ್ ಕಾಫಿಯನ್ನು ವೆಬ್ಸೈಟ್ಗೆ ಡೌನ್ಲೌಡ್ ಮಾಡಬೇಕು. ಆದರೆ, ಬೆಂಗಳೂರು ಮಹಾನಗರ ಕಾರ್ಯಪಡೆ(ಬಿಎಂಟಿಎಫ್) ಹಾಗೂ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದವರು ಇಲ್ಲಿಯವರೆಗೆ ಯಾವುದೇ ಎಫ್ಐಆರ್ ಕಾಫಿಯನ್ನು ವೆಬ್ಸೈಟ್ಗೆ ಡೌನ್ಲೌಡ್ ಮಾಡಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ಎಸಿಬಿ ಹಾಗೂ ಬಿಎಂಟಿಎಫ್ನವರು ಎಫ್ಐಆರ್ ಕಾಫಿಯನ್ನು ವೆಬ್ಸೈಟ್ಗೆ ಡೌನ್ಲೋಡ್ ಮಾಡದೇ ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. ಅರ್ಜಿದಾರ ವಕೀಲರ ವಾದ ಆಲಿಸಿದ ನ್ಯಾಯಪೀಠವು ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಡಿ.12ಕ್ಕೆ ಮುಂದೂಡಿತು.