ಮಹಿಳೆಯ ಕೊಲೆ: ಪತಿಯ ಬಂಧನ
ಬೆಂಗಳೂರು, ಡಿ.10: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನು ಕೊಲೆಗೈದಿರುವ ಆರೋಪದ ಮೇಲೆ ಪತಿಯನ್ನು ಇಲ್ಲಿನ ರಾಜಗೋಪಾಲ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಗರದ ರಂಜಿನಿಪುರಂ ರಸ್ತೆಯ ಮೂರನೆ ಕ್ರಾಸ್ನ ಶೋಭಾ(26) ಕೊಲೆಯಾಗಿದ್ದು, ಕೃತ್ಯವೆಸಗಿದ ಆರೋಪದ ಮೇಲೆ ಪತಿ ಚೆನ್ನಕೇಶವ(32)ನನ್ನು ಬಂಧಿಸಿದ್ದಾರೆಂದು ಡಿಸಿಪಿ ಚೇತನ್ ಸಿಂಗ್ ರಾತೋರ್ ತಿಳಿಸಿದ್ದಾರೆ.
ಘಟನೆ ವಿವರ: ಕೂಲಿ ಕೆಲಸ ಮಾಡುತ್ತಿದ್ದ ಚೆನ್ನಕೇಶವ ಶೋಭಾ ಅವರನ್ನು ವಿವಾಹವಾಗಿದ್ದು, ಇತ್ತೀಚೆಗೆ ದಂಪತಿ ನಡುವೆ ಕೌಟುಂಬಿಕ ವಿಚಾರದ ಹಿನ್ನೆಲೆಯಲ್ಲಿ ಆಗಾಗ ಜಗಳ ನಡೆಯುತ್ತಿತ್ತು. ಶನಿವಾರ ರಾತ್ರಿ 7ರ ವೇಳೆ ಕೂಡ ಪತಿ-ಪತ್ನಿ ನಡುವೆ ಜಗಳವುಂಟಾಗಿದೆ ಎಂದು ತಿಳಿದುಬಂದಿದೆ.
ಜಗಳದಿಂದ ಆಕ್ರೋಶಗೊಂಡ ಚೆನ್ನಕೇಶವ, ಪತ್ನಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿ ಕೆನ್ನಾಲಿಗೆ ಸಿಲುಕಿ ಸುಟ್ಟು ಹೋಗಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಕರಣ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ರಾಜಗೋಪಾಲ ನಗರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.