ಹನಿ ನೀರಾವರಿ ಮಹತ್ವದ ಬಗ್ಗೆ ತರಬೇತಿ ಕಾರ್ಯಕ್ರಮ
ಬ್ರಹ್ಮಾವರ, ಡಿ.10: ಕೃಷಿ ತಂತ್ರಜ್ಞಾನ ಸಪ್ತಾಹ(ಜೈ ಕಿಸಾನ್-ಜೈ ವಿಜ್ಞಾನ ಸಪ್ತಾಹ)ದ ಪ್ರಯುಕ್ತ ಹಸಿರು ಮನೆ ಮತ್ತು ಪರದೆ ಮನೆಯಲ್ಲಿ ತರಕಾರಿ ಕೃಷಿ ಹಾಗೂ ತೋಟಗಾರಿಕೆ ಬೆಳೆಯಲ್ಲಿ ಹನಿ ನೀರಾವರಿಯ ಮಹತ್ವ ತರಬೇತಿ ಕಾರ್ಯಕ್ರಮವನ್ನು ಇತ್ತೀಚೆಗೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತೋಟಗಾರಿಕಾ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ ಮಾತನಾಡಿ, ರೈತರು ಇಲಾಖೆಯಿಂದ ಸಹಾಯಧನ ಪಡೆದು ಕೊಂಡು ನರ್ಸರಿ ಕೃಷಿಯನ್ನು ಕೈಗೊಂಡು ಹೆಚ್ಚಿನ ಲಾಭ ಗಳಿಸಬೇಕು. ಹನಿ ನೀರಾವರಿಗೆ ರೈತರು ಮೊರೆಹೋಗುವುದು ಇಂದಿನ ಅತ್ಯವಶ್ಯಕವಾಗಿದೆ. ಅಲ್ಲದೇ ಪಾಲಿಹೌಸ್ನಲ್ಲಿ ಹನಿ ನೀರಾವರಿ ಅತಿ ಮುಖ್ಯವಾಗಿದೆ ಎಂದು ತಿಳಿಸಿದರು.
ಬ್ರಹ್ಮಾವರ ಕೃಷಿ ಡಿಪ್ಲೊಮಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸುಧೀರ್ ಕಾಮತ್ ಮಾತನಾಡಿ, ವಾತಾವರಣದಲ್ಲಿನ ವೈಪರಿತ್ಯವನ್ನು ಎದು ರಿಸಲು ಸಾಧ್ಯವಾಗದ ಕಾರಣ ಪಾಲಿಹೌಸ್ನ್ನು ಸೃಷ್ಟಿಸಲಾಯಿತು. ನೆರಳು ಪರದೆ ಮನೆ ಮಾಡುವುದರ ಜೊತೆಗೆ ಅದರ ತಾಪಮಾನವನ್ನು ಹೇಗೆ ಕಾಪಾಡಿ ಕೊಳ್ಳಬೇಕು ಎಂಬುದನ್ನು ತಿಳಿದಿರಬೇಕು. ಸಂಪೂರ್ಣವಾಗಿ ಪಾಲಿಹೌಸ್ನ ಮಾಹಿತಿ ಪಡೆದುಕೊಂಡು ಕೀಟ ಮತ್ತು ರೋಗಗಳ ಬಾಧೆ ಕಡಿಮೆ ಮಾಡಿ ಕೊಂಡು ಆರೋಗ್ಯಕರವಾದ ತರಕಾರಿಯನ್ನು ಬೆಳೆಸಬಹುದಾಗಿದೆ ಎಂದರು.
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಧನಂಜಯ ಬಿ. ಮಾತನಾಡಿ, ತರಕಾರಿ ಮತ್ತು ಹೂ ಕೃಷಿಗೆ ಪಾಲಿಹೌಸ್ ಅತಿ ಉತ್ತಮವಾಗಿದೆ. ಪಾಲಿ ಹೌಸ್ನಲ್ಲಿ ಬರುವ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳುವುದಕ್ಕಿಂತ ಅದರ ಬಗ್ಗೆ ಅನುಭವ ಇರುವವರ ಬಳಿ ಮಾಹಿತಿ ಪಡೆದುಕೊಳ್ಳುವುದು ಉತ್ತಮ ಎಂದು ಅವರು ಹೇಳಿದರು.
ನಿವೃತ್ತ ತೋಟಗಾರಿಕಾ ಅಧಿಕಾರಿ ಕುಚೇಲಯ್ಯ ವಿ. ಮಾತನಾಡಿ, ಇಲಾಖೆ ಗಳಿಂದ ಸಹಾಯಧನ ಪಡೆದುಕೊಳ್ಳುವ ರೈತರು ಅದರ ಸದುಪಯೋಗ ಪಡೆದು ಕೊಳ್ಳುತ್ತಿಲ್ಲ. ಕೃಷಿಯಲ್ಲಿ ಕಷ್ಟ ಪಟ್ಟರೆ ಖಂಡಿತ ಪಲ ಸಿಗುತ್ತದೆ. ಈಗ ಸರಕಾರ ದಿಂದ ಸಾಕಷ್ಟು ಅನುದಾನ ಸಿಗುತ್ತಿದ್ದು, ಅದರ ಸದುಪಯೋಗ ಪಡೆದು ಕೊಂಡು ಉತ್ತಮ ಕೃಷಿಯನ್ನು ಮಾಡಬೇಕೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಾವರ ವಲಯ ಕೃಷಿ ತೋಟಗಾರಿಕೆ ಸಂಶೋಧನ ಕೇಂದ್ರದ ಸಹಸಂಶೋಧನಾ ಮತ್ತು ಸಹವಿಸ್ತರಣಾ ನಿರ್ದೇಶಕ ಡಾ.ಎಸ್.ಯು. ಪಾಟೀಲ್ ಮಾತನಾಡಿ, ಯಾವುದೇ ಒಂದು ಕೃಷಿಯಲ್ಲಿ ಸೂಕ್ತವಾದ ವಾತಾ ವರಣ, ಪೋಷಕಾಂಶ ಮತ್ತು ನೀರನ್ನು ಒದಗಿಸಿದರೆ ಹೆಚ್ಚಿನ ಇಳುವರಿ ಪಡೆ ಯಲು ಸಾಧ್ಯ. ಪಾಲಿಹೌಸ್ನಲ್ಲಿ ಉಷ್ಣಾಂಶ ಹೆಚ್ಚು ಮತ್ತು ಆಂದ್ರತೆ ಕಡಿಮೆ ಇರಬೇಕು. ಪಾಲಿಹೌಸ್ ನಿರ್ಮಾಣದ ಕುರಿತ ಮಾಹಿತಿ, ಪಾಲಿಶೀಟನ್ನು ಹಾಕುವಾಗ ಸರಿಯಾದ ಕ್ರಮಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ವಿಜ್ಞಾನಿ(ಗೃಹವಿಜ್ಞಾನ) ಸಿದ್ದರೂಢ ಪಡ್ಡೆಪ್ಪಗೊಳ ಸ್ವಾಗತಿಸಿದರು. ವಿಜ್ಞಾನಿ (ತೋಟಗಾರಿಕೆ) ಚೈತನ್ಯ ಎಚ್.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರದ ವಿಜ್ಞಾನಿ ಕುಮಾರ್ ವಂದಿಸಿದರು. ತೋಟಗಾರಿಕೆ ತಜ್ಞ ಡಾ.ವಿಕ್ರಮ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ 60ಕ್ಕೂ ಅಧಿಕ ರೈತರು ಪಾಲ್ಗೊಂಡಿದ್ದರು.