ರೈಲು ಢಿಕ್ಕಿಯಾಗಿ ಆರು ಆನೆಗಳ ಸಾವು
ಸಾಂದರ್ಭಿಕ ಚಿತ್ರ
ಗುವಾಹಟಿ, ಡಿ.10: ಗುವಾಹಟಿ-ನಹರ್ಲಗನ್ ಎಕ್ಸ್ಪ್ರೆಸ್ ರೈಲು ಢಿಕ್ಕಿ ಹೊಡೆದ ಕಾರಣ ಮರಿಯಾನೆ ಸಹಿತ ಆರು ಆನೆಗಳು ಮೃತಪಟ್ಟ ಘಟನೆ ರವಿವಾರ ಬೆಳಗ್ಗಿನ ಜಾವ 1 ಗಂಟೆಗೆ ಅಸ್ಸಾಂನ ಸೋನಿತ್ಪುರ ಜಿಲ್ಲೆಯ ಬಲಿಪಾರ ಎಂಬಲ್ಲಿ ನಡೆದಿದೆ ಎಂದು ರೈಲ್ವೇ ಮೂಲಗಳು ತಿಳಿಸಿವೆ.
ಆನೆ ಕಾರಿಡಾರ್(ಆನೆಗಳ ಸುರಕ್ಷಿತ ಚಲನವಲನಕ್ಕೆ ಮೀಸಲಿಟ್ಟ ಪ್ರದೇಶ)ಗೆ ಸೇರಿದ ಈ ಪ್ರದೇಶದಲ್ಲಿ ಆನೆಗಳ ಹಿಂಡು ರೈಲ್ವೇ ಹಳಿ ದಾಟುತ್ತಿದ್ದಾಗ ವೇಗವಾಗಿ ಧಾವಿಸಿ ಬಂದ ರೈಲು ಢಿಕ್ಕಿಯಾಗಿದೆ . ಸೋನಿತ್ಪುರದಲ್ಲಿ ಈ ಹಿಂದೆ ದಟ್ಟವಾದ ಅರಣ್ಯವಿದ್ದರೆ ಕ್ರಮೇಣ ಶೇ.70ರಷ್ಟು ಅರಣ್ಯಗಳನ್ನು ನಾಶಪಡಿಸಲಾಗಿದ್ದು ಇದರಿಂದ ಆನೆಗಳು ಜನವಾಸ್ತವ್ಯದ ಪ್ರದೇಶಕ್ಕೆ ನುಗ್ಗುತ್ತವೆ ಎಂದು ವಿಶ್ವ ವನ್ಯಜೀವಿ ಕೋಶದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಸ್ಸಾಂನಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ಸಂಭವಿಸುತ್ತಿದ್ದು 2013ರಿಂದ 2106ರ ಅವಧಿಯಲ್ಲಿ ಸುಮಾರು 140 ಆನೆಗಳು ಅಸ್ವಾಭಾವಿಕವಾಗಿ ಮೃತಪಟ್ಟಿವೆ ಎಂದು ಮೂಲಗಳು ತಿಳಿಸಿವೆ.
Next Story