ಮಧುಮೇಹ ಬಾರದಂತೆ ಮುಂಜಾಗೃತೆಯ ಅಗತ್ಯವಿದೆ: ಡಾ. ಕೆ.ಎಂ.ಪ್ರಸನ್ನಕುಮಾರ್
ಸಾಗರ, ಡಿ.10: ಇಂದಿನ ದಿನಗಳಲ್ಲಿ ಮಧುಮೇಹ ಹೆಚ್ಚುತ್ತಿದ್ದು, ಮಧುಮೇಹ ರೋಗ ಬಾರದಂತೆ ಮುಂಜಾಗೃತೆ ವಹಿಸುವ ಅಗತ್ಯವಿದೆ ಎಂದು ಬೆಂಗಳೂರಿನ ಮಧುಮೇಹ ತಜ್ಞರಾದ ಡಾ. ಕೆ.ಎಂ.ಪ್ರಸನ್ನಕುಮಾರ್ ಹೇಳಿದ್ದಾರೆ.
ಸಾಗರದ ಶೃಂಗೇರಿ ಶಂಕರಮಠದಲ್ಲಿ ಶನಿವಾರ ಸಾಗರ ವಿಜ್ಞ್ಞಾನ ವೇದಿಕೆ ಮತ್ತು ದಿನೇಶ್ ಜೋಷಿ ಪೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಉಚಿತ ಮಧುಮೇಹ ರೋಗ ತಪಾಸಣೆ, ದಂತತಪಾಸಣೆ ಶಿಬಿರ ಹಾಗೂ ಬಾಲ ಮಧುಮೇಹಿ ಕ್ಲಬ್’ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕಾಲಕಾಲಕ್ಕೆ ಮಧುಮೇಹಕ್ಕೆ ಸಂಬಂಧಪಟ್ಟಂತೆ ಚಿಕಿತ್ಸೆ ತೆಗೆದುಕೊಂಡು,ವೈದ್ಯರು ನೀಡುವ ಸಲಹೆಗಳನ್ನು ಪಾಲಿಸುವ ಜೊತೆಗೆ ಯೋಗಾಸನ, ವಾಯುವಿಹಾರದಂತಹ ಚಟುವಟಿಕೆ ಕೈಗೊಳ್ಳುವುದು,ಕಟ್ಟುನಿಟ್ಟಿನ ಆಹಾರಕ್ರಮ ಅನುಸರಿಸಿದರೆ ಮಧುಮೇಹವನ್ನು ನಿಯಂತ್ರಿಸಬಹುದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಜ್ಞ್ಞಾನ ವೇದಿಕೆ ಅಧ್ಯಕ್ಷ ಪ್ರೊ. ಎಚ್.ಎಲ್.ಎಸ್.ರಾವ್, ವಿಜ್ಞ್ಞಾನ ವೇದಿಕೆ ಮೂಲಕ ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞ್ಞಾನ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದು, ಉಪನ್ಯಾಸ ಮಾಲಿಕೆ ಮೂಲಕ ವಿಜ್ಞ್ಞಾನದ ವಿವಿಧ ಮಜಲುಗಳನ್ನು ತೆರೆದಿಡಲಾಗುತ್ತಿದೆ,ಇಂತಹ ಜಾಗೃತಿ ಕಾರ್ಯಕ್ರಮವನ್ನು ಜೋಷಿ ಪೌಂಡೇಶನ್ ಮೂಲಕ ಯಶಸ್ವಿಯಾಗಿ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ದಂತ ವೈದ್ಯ ಡಾ.ಗುರುಪ್ರಸಾದ್ ಜಿ.ಎಂ. ಹಾಗೂ ಸುಮುಖ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅರುಣಕುಮಾರ್ ಕೆ.ಬಿ. ಆರೋಗ್ಯ ಮಾಹಿತಿ ನೀಡಿದರು. ವೇದಿಕೆಯಲ್ಲಿ ಡಾ. ನಾಗೇಂದ್ರ ಶೆಟ್ಟಿ, ವಿಜ್ಞ್ಞಾನ ವೇದಿಕೆಯ ಎಚ್.ಕೆ.ಪರಮಾತ್ಮ, ರಾಜೇಶ್, ಸೀತಾರಾಮ್ ಪಟಗಾರ್ ಹಾಜರಿದ್ದರು. ಮಹಾಲಕ್ಷ್ಮೀ ಹೆಗಡೆ ಪ್ರಾರ್ಥಿಸಿದರು. ರವಿಶಂಕರ್ ಬಿ. ಸ್ವಾಗತಿಸಿದರು. ಮಂಜಪ್ಪ ಕೆ. ವಂದಿಸಿದರು. ವಿ.ಸಿ.ಪಾಟೀಲ್ ನಿರೂಪಿಸಿದರು.