ತಾಂತ್ರಿಕತೆ ಬಳಸಿಕೊಳ್ಳುವಲ್ಲಿ ಗೊಂದಲ: ಡಾ.ಮಹದೇವಪ್ಪ ವಿಷಾದ
ಮಳವಳ್ಳಿಯಲ್ಲಿ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ
ಮಂಡ್ಯ, ಡಿ.10: ವಿಜ್ಞಾನ ಮತ್ತು ತಾಂತ್ರಿಕತೆಯನ್ನು ಬಳಸಿಕೊಳ್ಳುವಲ್ಲಿ ನಮ್ಮಲ್ಲಿ ಸಾಕಷ್ಟು ಗೊಂದಲಗಳಿವೆ. ಹೊಸ ತಾಂತ್ರಿಕತೆಯನ್ನು ನಿಲ್ಲಿಸುವ ಪ್ರಯತ್ನಗಳೇ ಹೆಚ್ಚಾಗಿ ನಡೆಯುತ್ತಿರುವುದು ದುರದೃಷ್ಟಕರ ಎಂದು ಧಾರವಾಡ ಕೃಷಿ ವಿವಿ ವಿಶ್ರಾಂತ ಉಪ ಕುಲಪತಿ ಪದ್ಮಭೂಷಣ ಡಾ.ಮಹದೇವಪ್ಪ ವಿಷಾದಿಸಿದರು.
ಮಳವಳ್ಳಿ ಶಾಂತಿ ಕಾಲೇಜು ಆವರಣದಲ್ಲಿ ಡಾ.ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ವತಿಯಿಂದ ರವಿವಾರ ಆಯೋಜಿಸಿದ್ದ ಉದ್ಯೋಗ ಪರ್ವ (ಉದ್ಯೋಗ ಮೇಳ) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೃಷಿ ಮುಂತಾದ ಕ್ಷೇತ್ರಗಳಲ್ಲಿ ತಾಂತ್ರಿಕತೆ ವೈಜ್ಞಾನಿಕತೆಯನ್ನು ಅಳವಡಿಸಿಕೊಳ್ಳಬೇಕು. ಬಿಟಿ ಹತ್ತಿ ತಳಿ ಪರಿಚಯವಾದ ಹಿನ್ನೆಲೆಯಲ್ಲಿ ಹೆಚ್ಚು ಹತ್ತಿ ಉತ್ಪತ್ತಿಯಾಯಿತು. ಇದರಿಂದಾಗಿ ವಿಶ್ವದಲ್ಲಿ ಹತ್ತಿ ಉತ್ಪಾದನೆಯಲ್ಲಿ 5ನೆ ಸ್ಥಾನದಲ್ಲಿದ್ದ ಭಾರತ ಎರಡನೆ ಸ್ಥಾನಕ್ಕೆ ಬಂದಿದೆ ಎಂದು ಅವರು ಹೇಳಿದರು.
ಡಾ. ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಡಾ.ಬಿ.ಎಸ್.ಶಿವಣ್ಣ ಮಾತನಾಡಿ, ಮಳವಳ್ಳಿ ತಾಲೂಕನ್ನು ನಿರುದ್ಯೋಗ ಮುಕ್ತ ತಾಲೂಕಾಗಿ ಪರಿವರ್ತನೆ ಮಾಡಬೇಕೆಂಬ ಗುರಿಯನ್ನಿಟ್ಟುಕೊಂಡು ಈ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದರು.
ಮೇಕ್ ಇನ್ ಇಂಡಿಯಾ ಫೌಂಡೇಷನ್ನ ಜಿ.ನಾಗರಾಜು, ಎಸ್.ಡಿಸೈನರ್ಸ್ ಲಿಮಿಟೆಡ್ನ ಬಿಸಿನೆಸ್ ಹೆಡ್ ಟಿ.ನಾಗರಾಜ, ಕ್ಲಸ್ಟರ್ ಅಧ್ಯಕ್ಷ ಅರವಿಂದ್ ಬುರ್ಜಿ, ಸಮಾಜಸೇವಕಿ ಆಶಾ, ವಿಐಟಿಯು ಉಪನ್ಯಾಸಕ ಡಾ.ಅಶ್ವಿನ್ ಚನ್ನೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.