ಕನ್ನಡ ನಾಡುನುಡಿಗಾಗಿ ಮಂಡ್ಯ ಮ್ಯಾರಥಾನ್ ಓಟ
ಮಂಡ್ಯ, ಡಿ.10: ‘ಕನ್ನಡಕ್ಕಾಗಿ ಓಡು-ಕನ್ನಡಕ್ಕಾಗಿ ಬಾಳು’ ಎಂಬ ಘೋಷಣೆಯೊಂದಿಗೆ ಕಾಯಕಯೋಗಿ ಫೌಂಡೇಷನ್, ಆರ್ಗಾನಿಕ್ ಮಂಡ್ಯ, ಅನನ್ಯ ಆರ್ಟ್ಸ್, ಅರುಣೋದಯ ಟ್ರಸ್ಟ್, ಸೇರಿದಂತೆ ವಿವಿಧ ಸಂಘಟನೆಯಗಳ ಸಹಯೋಗದಲ್ಲಿ ಆಯೋಜಿಸಿದ್ದ ‘ಮಂಡ್ಯ ಮ್ಯಾರಥಾನ್’ ರಾಜ್ಯಮಟ್ಟದ ಓಟ ಸ್ಪರ್ಧೆಯು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರವಿವಾರ ಮುಂಜಾನೆ ನಡೆಸಲಾಯಿತು.
ಮಂಡ್ಯ, ಮೈಸೂರು, ದಾವಣಗೆರೆ, ರಾಮನಗರ ಸೇರಿದಂತೆ ಇನ್ನಿತರ ಹೊರ ಜಿಲ್ಲೆಗಳಿಂದ ಕ್ರೀಡಾಪಟುಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಗೃಹಿಣಿಯರು, ಹಿರಿಯ ನಾಗರಿಕರು ಸೇರಿದಂತೆ ಸುಮಾರು ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಕನ್ನಡ ಜಾಗೃತಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಕ್ರೀಡಾ ಸ್ಫೂರ್ತಿಯನ್ನು ಮೆರೆದರು.
ನಗರದ ಸ್ವರ್ಣಸಂದ್ರ ಬಡಾವಣೆಯ ಶ್ರೀ ಶಿವಕುಮಾರ ಸ್ವಾಮೀಜಿ ಉದ್ಯಾನದ ಬಳಿಯಿಂದ ಹೊಸಬೂದನೂರು ಗ್ರಾಮದವರೆಗೆ ಏರ್ಪಡಿಸಿದ್ದ ಮ್ಯಾರಾಥಾನ್ಗೆ ಕಾನೂನು ಮತ್ತು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ನ್ಯಾಯಾಧೀಶ ಮನ್ಸೂರ್ ಅಹಮದ್ ಜಮಾನ್, ಮಂಡ್ಯ ಆರ್ಗಾನಿಕ್ ಸಂಸ್ಥೆಯ ಮಧುಚಂದನ್, ಡಿವೈಎಸ್ಪಿ ಚಂದ್ರಶೇಖರ್, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಇತರ ಗಣ್ಯರು ಚಾಲನೆ ನೀಡಿದರು.
ಸಮಾಜ ಸೇವಕ ಗಣಿಗ ರವಿಕುಮಾರ್, ಕಾಯಕಯೋಗಿ ಫೌಂಡೇಷನ್ ಅಧ್ಯಕ್ಷ ಎಂ.ಶಿವಕುಮಾರ್, ಉಪಾಧ್ಯಕ್ಷ ಹೊನ್ನೇಶ್, ಅರುಣೋದಯ ಟ್ರಸ್ಟ್ನ ಅಧ್ಯಕ್ಷೆ ಅರುಣ ಜ್ಯೋತಿ, ಅನನ್ಯ ಆರ್ಟ್ಸ್ ಸಂಸ್ಥೆಯ ಅನುಪಮಾ, ರಾಜ್ಯ ಮತ್ತು ಪ್ರಾದೇಶಿಕ ಪತ್ರಿಕಾ ವರದಿಗಾರರ ಒಕ್ಕೂಟದ ಅಧ್ಯಕ್ಷ ಬಿ.ಟಿ.ಮೋಹನ್ಕುಮಾರ್, ವಕೀಲ ಎಂ.ಗುರುಪ್ರಸಾದ್, ಬೂದನೂರು ಗ್ರಾಪಂ ಸದಸ್ಯ ಬಿ.ಕೆ.ಸತೀಶ್ ಉಪಸ್ಥಿತರಿದ್ದರು.
ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ಮುಖಂಡರಾದ ಡಾ.ಕೃಷ್ಣ, ಕೀಲಾರ ರಾಧಾಕೃಷ್ಣ, ಮಂಡ್ಯ ಆರ್ಗ್ರ್ಯಾನಿಕ್ ಸಂಸ್ಥೆಯ ಮಧುಚಂದನ್, ರಾಜ್ಯ ಸರರಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಬಿ.ಎಂ.ಅಪ್ಪಾಜಪ್ಪ ಇತರ ಗಣ್ಯರು ವಿಜೇತರಿಗೆ ಪಶಸ್ತಿಪತ್ರ ವಿತರಿಸಿದರು.