ಪ್ರಧಾನಿಯ ಸುಳ್ಳಿನಿಂದ ನೋವಾಗಿದೆ; ಮನಮೋಹನ್ ಸಿಂಗ್
ಪಾಕ್ ಹಸ್ತಕ್ಷೇಪ ಆರೋಪ
ಹೊಸದಿಲ್ಲಿ, ಡಿ.11: ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಮೇಲುಗೈ ಸಾಧಿಸುವ ಸಲುವಾಗಿ ಸುಳ್ಳು ಮಾತನಾಡುವ ಮೂಲಕ ವಿವಾದಗಳನ್ನು ಹುಟ್ಟುಹಾಕುತ್ತಿರುವುದರಿಂದ ತೀವ್ರ ನೋವು ಮತ್ತು ದುಃಖವಾಗಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಲಿದ್ದಾರೆ.
ಕಳೆದ ವಾರ ಕಾಂಗ್ರೆಸ್ನಿಂದ ಉಚ್ಚಾಟನೆಗೊಂಡ ಮಣಿಶಂಕರ್ ಅಯ್ಯರ್ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದ ಸಿಂಗ್, ಗುಜರಾತ್ ಚುನಾವಣೆಯಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡುತ್ತಿದೆ ಮತ್ತು ಗುಜರಾತ್ನಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಪಾಕಿಸ್ತಾನದ ಜೊತೆ ರಹಸ್ಯ ಒಪ್ಪಂದ ನಡೆಸಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯ ಆರೋಪಕ್ಕೆ ಈ ರೀತಿ ಪ್ರತಿಕ್ರಿಯೆ ನೀಡಿದರು. ಗುಜರಾತ್ನಲ್ಲಿ ಸೋಲಿನ ಭಯದಿಂದ ಪ್ರಧಾನಿ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಾ ಎಲ್ಲಾ ರೀತಿಯ ಬೈಗುಳಗಳನ್ನು, ವಿವಾದಗಳನ್ನು. ಸುಳ್ಳುಗಳನ್ನು ಹೇಳುವುದು ಅಕ್ಷಮ್ಯ ಎಂದು ಸಿಂಗ್ ತಿಳಿಸಿದರು.
ಈ ಔತಣಕೂಟದಲ್ಲಿ ಮಾಜಿ ವಿದೇಶಾಂಗ ಸಚಿವ ಕೆ ನಟ್ವರ್ ಸಿಂಗ್, ಮಾಜಿ ಸೇನಾ ಮುಖ್ಯಸ್ಥ ದೀಪಕ್ ಕಪೂರ್, ಮಾಜಿ ರಾಜತಾಂತ್ರಿಕರಾದ ಸಲ್ಮಾನ್ ಹೈದರ್, ಸತಿಂದರ್ ಲಾಂಬಾ, ಟಿಸಿಎ ರಾಘವನ್, ಶರತ್ ಸಬರ್ವಾಲ್, ಚಿನ್ಮಯ ಗರೆಖಾನ್ ಮತ್ತು ಹಿರಿಯ ಪತ್ರಕರ್ತರಾದ ಪ್ರೇಮ್ ಶಂಕರ್ ಝಾ, ರಾಹುಲ್ ಖುಶ್ವಂತ್ ಸಿಂಗ್ ಹಾಗೂ ಇತರರು ಉಪಸ್ಥಿತರಿದ್ದರು.