ಉಪ ಲೋಕಾಯುಕ್ತರ ಶಿಫಾರಸ್ಸು ತಿರಸ್ಕಾರ: ಜಯಚಂದ್ರ
ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ
ಬೆಂಗಳೂರು, ಡಿ. 11: ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ಕರ್ತವ್ಯಲೋಪವೆಸಗಿದ ಆರೋಪಕ್ಕೆ ಗುರಿಯಾಗಿರುವ ಕಿರಿಯ ಶ್ರೇಣಿಯ ನಾಲ್ವರು ಕೆಎಎಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂಬ ಉಪ ಲೋಕಾಯುಕ್ತರ ಶಿಫಾರಸ್ಸನ್ನು ತಿರಸ್ಕರಿಸಲು ಸಂಪುಟ ತೀರ್ಮಾನಿಸಿದೆ ಎಂದು ಕಾನೂನು ಸಚಿವ ಜಯಚಂದ್ರ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ರೈತರಿಗೆ ಬೆಳೆ ಪರಿಹಾರಕ್ಕೆ ಸಂಬಂಧಿಸಿದಂತೆ ಒಟ್ಟು 337 ಚೆಕ್ ವಿತರಣೆ ಮಾಡಿದ್ದು, ಆ ಪೈಕಿ 44 ಚೆಕ್ ವಿತರಣೆಯ ದಾಖಲೆಗಳೇ ಇಲ್ಲ.
ಅಲ್ಲದೆ, ಫಲಾನುಭವಿಗಳ ಸಹಿಗಳು ಹೊಂದಾಣಿಕೆಯಾಗುತ್ತಿಲ್ಲ. ಈ ಸಂಬಂಧ ಕಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿಗಳಾದ ಅನಿತಾಲಕ್ಷ್ಮಿ, ಗ್ರಾಮ ಲೆಕ್ಕಿಗ ನಾಗರಾಜ್, ಮುದ್ದುಶೆಟ್ಟಿ ಸೇರಿದಂತೆ ಅಧಿಕಾರಿಗಳು ಕರ್ತವ್ಯ ಲೋಪವೆಸಗಿದ್ದರು ಎಂದರು.
ಈ ಪ್ರಕರಣದಲ್ಲಿ ಉಪ ಲೋಕಾಯುಕ್ತರ ಶಿಫಾರಸ್ಸು ಹಾಗೂ ಕಂದಾಯ ಇಲಾಖೆಯ ವರದಿಗಳನ್ನು ಪರಿಶೀಲಿಸಿದ ಬಳಿಕ ಸಂಪುಟದ ತೀರ್ಮಾನದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಾನೂನು ಸಚಿವ ಜಯಚಂದ್ರ ತಿಳಿಸಿದರು.