ಮಣಿಪಾಲ: ಡಿ.16ರಿಂದ ರಾ.ಮಟ್ಟದ ಶಿಲ್ಪಕಲಾ ಶಿಬಿರ
ಉಡುಪಿ ಪರ್ಬ
ಉಡುಪಿ, ಡಿ.12: ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ನಡೆಯುವ ಉಡುಪಿ ಪರ್ಬದ ಪ್ರಯುಕ್ತ ರಾಷ್ಟ್ರಮಟ್ಟದ ಶಿಲ್ಪಕಲಾ ಶಿಬಿರ ಡಿ.16ರಿಂದ 23ರವರೆಗೆ ಮಣಿಪಾಲದ ಮಣ್ಣಪಳ್ಳ ರೋಟರಿ ಸಭಾಭವನದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಮಣ್ಣಪಳ್ಳ ಅಭಿವೃದ್ಧಿ ಸಮಿತಿ ಹಾಗೂ ಉಡುಪಿ ನಿರ್ಮಿತಿ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ನಡೆಯುವ ಈ ಶಿಬಿರವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಡಿ.16ರ ಶನಿವಾರ ಬೆಳಗ್ಗೆ 9:45ಕ್ಕೆ ಗಣ್ಯರು ಹಾಗೂ ಜನಪ್ರತಿನಿಧಿಗಳ ಉಪಸ್ಥಿತಿ ಯಲ್ಲಿ ಉದ್ಘಾಟಿಸಲಿದ್ದಾರೆ.
ದೇಶದ ವಿವಿದೆಡೆಗಳಿಂದ ಆಗಮಿಸುವ ಸುಮಾರು ಹತ್ತು ಮಂದಿ ಪ್ರಸಿದ್ಧ ಶಿಲ್ಪ ಕಲಾವಿದರು ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರಲ್ಲಿ ಬರೋಡದ ಮಹೇಶ್ ಬಾಳಿಗಾ, ಮೈಸೂರಿನ ದ್ವಾರಕಿ, ಮಣಿಪಾಲದ ಗಣೇಶ್ ಉರಾಳ, ಗುರುರಾಜ ಎಸ್.ನಾಯಕ್, ಬೆಂಗಳೂರಿನ ಅನಿಲ್, ಚೆನ್ನೈನ ವಿಜಯ ಕುಮಾರ್, ಕೇರಳದ ಸುನ್ನಿ ಜೊಸೇಫ್, ಅನೀಸ್ ಶಿಲ್ಪಿ, ಮೂಡಬಿದ್ರೆಯ ವಿಶ್ವನಾಥ್ ಹಾಗೂ ಪ್ರಮೋದ್ ಶಿಲ್ಪಿ ಸೇರಿದ್ದಾರೆ.
ಡಿ.16ರ ಸಂಜೆ 4 ಕ್ಕೆ ಮಣಿಪಾಲ ರೋಟರಿ ಸಭಾಬವನದಲ್ಲಿ ಬೆಂಗಳೂರಿನ ರವಿಕುಮಾರ್ ಕಾಶಿ ಅವರು ‘ದೃಶ್ಯ ಕಲೆಯಲ್ಲಿ ಸಂಪ್ರದಾಯ ಮತ್ತು ಸಮಕಾಲೀನದ ಅನುಸಂಧನಾ’ ವಿಷಯದ ಕುರಿತು ಕಲಾ ಸಂವಾದ ನಡೆಸಿಕೊಡಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.