ಎಸ್ಎಸ್ಎಲ್ಸಿ ಪರೀಕ್ಷೆಯ ಭಯ ಬೇಡ: ಕ್ಯಾ. ಆನಂದ್
ಪಡುಬಿದ್ರೆ, ಡಿ. 12: ಎಸ್ಎಸ್ಎಲ್ಸಿ ಪರೀಕ್ಷೆಯ ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯ ಇಲ್ಲ. ತಮ್ಮ ಪಠ್ಯದ ಬಗ್ಗೆ ಗಮನ ನೀಡಿ ಅಭ್ಯಾಸ ಮಾಡುವ ಮೂಲಕ ಧೈರ್ಯವಾಗಿ ಎದುರಿಸಬಹುದು ಎಂದು ಧಾರವಾಡದ ಜೀವನ ಕೌಶಲ್ಯ ತರಬೇತುದಾರ ಕ್ಯಾಪ್ಟನ್ ಆನಂದ್ ಹೇಳಿದರು.
ಅವರು ಮಂಗಳವಾರ ಎರ್ಮಾಳು ಜನಾರ್ಧನ ಜನಕಲ್ಯಾಣ ಸಭಾಭವನದಲ್ಲಿ ಪಡುಬಿದ್ರೆ ರೋಟರಿ ಕ್ಲಬ್, ಉಡುಪಿ ಜಿಲ್ಲಾ ಉಪನಿರ್ದೇಶಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಎಸ್ಎಸ್ಎಲ್ಸಿ ಮಕ್ಕಳಿಗಾಗಿ ಆಯೋಜಿಸಿದ ಪ್ರೇರೇಪಣಾ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಜೀವನದಲ್ಲಿ ಇತರೆಲ್ಲಾ ಪರೀಕ್ಷೆಯಂತೆ ಎಸ್.ಎಸ್.ಎಲ್.ಸಿ. ಪರೀಕ್ಷೆಯೂ ಒಂದು ಎಂದರು.
ಜೀವನದಲ್ಲಿ ವಿಧವಿಧವಾದ ತಿರುವುಗಳನ್ನು ಕೊಡುವ ವಿಷಯಗಳ ಬಗ್ಗೆ ಉಲ್ಲೇಖಿಸುತ್ತಾರೆ. ಆದರೆ ಬದುಕನ್ನು ನಿರ್ಧಾರ ಮಾಡುವುದು ನಮ್ಮ ಕೈಯಲ್ಲಿದೆ. ಇಲ್ಲಿ ಇದು ನನ್ನ ಜೀವನ ಎಂಬುದು ಪ್ರಮುಖ ಅಂಶ ಎಂಬ ಆ ಕನಸಿಗಾಗಿ ಓದು ಮುಖ್ಯವಾಗಿದೆ ಎಂದರು.
ಸಮಾರಂಭವನ್ನು ಉದ್ಘಾಟಿಸಿದ ಪಡುಬಿದ್ರೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಪಡುಬಿದ್ರೆ ಬೀಡು ರತ್ನಕಾರರಾಜ್ ಅರಸು ಕಿನ್ಯಕ್ಕ ಬಲ್ಲಾಳ್ ಮಾತನಾಡಿ, ಕಳೆದ ಬಾರಿಯಂತೆ ಈ ಬಾರಿಯೂ ಉಡುಪಿ ಜಿಲ್ಲೆಯು ಶೈಕ್ಷಣಿಕವಾಗಿ ಉತ್ತಮ ಫಲಿತಾಂಶದ ಸಾಧನೆಯನ್ನು ಮುಂದುವರೆಸಬೇಕಿದೆ ಎಂದರು.
ಹೆಜಮಾಡಿ, ಅದಮಾರು ಪೊಲಿಪು, ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿರುವ ಪ್ರೌಢಶಾಲೆಗಳ ಸುಮಾರು 800ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡರು. ಬಳಿಕ ಕ್ಯಾಪ್ಟನ್ ಆನಂದ್ ಅವರು ತರಬೇತಿ ನೀಡಿದರು.
ಉದ್ಯಮಿ ಕಿಶೋರ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಡುಬಿದ್ರೆ ರೋಟರಿ ಕ್ಲಬ್ ಅಧ್ಯಕ್ಷರಾದ ರಮೀಝ್ ಹುಸೈನ್, ಶಿಕ್ಷಣಾಧಿಕಾರಿಗಳಾದ ನಾಗರಾಜ್, ಶಂಕರ ಸುವರ್ಣ, ಇನ್ನಾ ಎಂವಿ ಶಾಸ್ತ್ರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಪ್ರಾಶ್ ರಾವ್ ಪಿ.ಎನ್. ಉಪಸ್ಥಿತರಿದ್ದರು.
ಶಿಕ್ಷಣಾಧಿಕಾರಿ ಚಂದ್ರ ನಾಯ್ಕ ಸ್ವಾಗತಿಸಿದರು. ಪಡುಬಿದ್ರೆ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೀಪ್ ಪಲಿಮಾರು ವಂದಿಸಿದರು. ಶಿಕ್ಷಕ ರಾಜೇಂದ್ರ ಭಟ್ ನಿರೂಪಿಸಿದರು.