ಸಿಲಿಂಡರ್ನಲ್ಲಿ ಗಾಂಜಾ ಸಾಗಣೆ: ಬಂಧನ
ಬೆಂಗಳೂರು, ಡಿ.12: ಗ್ಯಾಸ್ ಸಿಲಿಂಡರ್ನಲ್ಲಿ ಮಾದಕ ವಸ್ತು ಗಾಂಜಾ ತುಂಬಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿ 3 ಕೆಜಿ ಗಾಂಜಾ ವಶಕ್ಕೆ ಪಡೆಯುವಲ್ಲಿ ಪೂರ್ವ ವಿಭಾಗದ ರಾಮಮೂರ್ತಿನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಗಳವಾರ ನಗರದಲ್ಲಿ ಪ್ರಕರಣ ಸಂಬಂಧ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತ ಸೀಮಂತ್ಕುಮಾರ್ ಸಿಂಗ್, ಬಂಧಿತ ಆರೋಪಿಯನ್ನು ವಿಜಿನಾಪುರ ನಿವಾಸಿ ಗುಲಾಬಿ(40) ಎಂದು ಹೇಳಿದರು.
ಪ್ರಕರಣ ವಿವರ: ನಗರದ ಕೆಆರ್ ಪುರಂ ರೈಲ್ವೆ ನಿಲ್ದಾಣ ಹಿಂಭಾಗ ಆಟೊದಲ್ಲಿ ಗ್ಯಾಸ್ ಸಿಲಿಂಡರ್ ಇಟ್ಟುಕೊಂಡು ಅದರಲ್ಲಿ ಮಾದಕ ವಸ್ತು ಗಾಂಜಾ ಪ್ಯಾಕೇಟ್ಗಳನ್ನು ತುಂಬಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಯಿಂದ 3 ಕೆಜಿ 350 ಗ್ರಾಂ ಗಾಂಜಾ, ಮೊಬೈಲ್, ಆಟೊರಿಕ್ಷಾ, ಎರಡು ಗ್ಯಾಸ್ಸಿಲಿಂಡರ್ ಹಾಗೂ ನಗದು ವಶಕ್ಕೆ ಪಡೆದು ಇಲ್ಲಿನ ರಾಮಮೂರ್ತಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಪ್ರಕರಣವನ್ನು ಭೇದಿಸಿದ ಪೊಲೀಸ್ ತಂಡವನ್ನು ಆಯುಕ್ತರು ಶ್ಲಾಘಿಸಿದರು.