ಮಾನವ ಸಂಪನ್ಮೂಲ ಸಚಿವಾಲಯದ ಅಧಿಕಾರಿಯ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆ
ಹೊಸದಿಲ್ಲಿ, ಡಿ.14: ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಮಾನವ ಸಂಪನ್ಮೂಲ ಸಚಿವಾಲಯದ ಅಧಿಕಾರಿಯ ಮೃತದೇಹವು ಪಾಲಮ್ನ ರೈಲ್ವೇ ಹಳಿಯ ಮೇಲೆ ಪತ್ತೆಯಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಚಿವಾಲಯದಲ್ಲಿ ಭಾರತೀಯ ನಾಗರಿಕ ಅಕೌಂಟ್ಸ್ ಸೇವಾ ಅಧಿಕಾರಿಯಾಗಿದ್ದ ಜಿತೇಂದ್ರ ಕುಮಾರ್ ಝಾ ಸೋಮವಾರದಂದು ದ್ವಾರ್ಕಾದಿಂದ ಮೂರು ದಿನಗಳ ಹಿಂದೆ ಮುಂಜಾನೆಯ ನಡಿಗೆಗೆ ತೆರಳಿದ್ದ ಸಮಯದಲ್ಲಿ ನಾಪತ್ತೆಯಾಗಿದ್ದರು. ಬುಧವಾರದಂದು ಅವರ ಮೃತದೇಹವು ಪಾಲಮ್ನಲ್ಲಿ ರೈಲ್ವೇ ಹಳಿಯ ಮೇಲೆ ಪತ್ತೆಯಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ ಅವರು ಆತ್ಮಹತ್ಯೆ ಮಾಡಿಕೊಂಡಂತೆ ಕಂಡುಬರುತ್ತಿರುವುದಾಗಿ ತಿಳಿಸಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಮೃತರ ಜೇಬಿನಲ್ಲಿ ಪತ್ತೆಯಾದ ಅವರು ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ನನ್ನ ಸಾವಿಗೆ ಯಾರೂ ಜವಾಬ್ದಾರರಲ್ಲ ಎಂದು ಬರೆಯಲಾಗಿದೆ.
Next Story