ಕರುಳ ಕೂಗು
ಕವನ
ಬಾಚಿ ಬೈತಲೆ ತೆಗೆದು
ಜಡೆಗಳೆರಡರ ನೆಯ್ದು
ನಿನ್ನ ಕಳುಹಿಸಿದ್ದೆ
ನನ್ನ ಪ್ರೇಮದ ಒಡಲು
ಯಾವುದೋ ರಣಹದ್ದು
ನಿನ್ನ ಸಾಯಿಸಿಹುದು!
ಇಂದೆನಗೆ ಘೋರ
ತಾಯ ಮಮತೆಗೆ ದ್ರೋಹ
ದಾನವತ್ವಕ್ಕೆ ಮತ್ತೆ ಎಣೆಯು ಉಂಟೆ!
‘ಬಾನು ಬೇಗಂ’ಳ ಬೆಂಕಿ
ಆರಿಲ್ಲ ಇನ್ನೂ!
ದಾನಮ್ಮ! ನನ್ನಮ್ಮ ನೀನು ಬಲಿಯೇ?
ಸಜ್ಜೆ ರೊಟ್ಟಿಯ ಕೊಟ್ಟು
ಅಗಸೆ ಚಟ್ನಿಯ ನೀಡಿ
ನಗುವ ಕಾಣುವ ಬಯಕೆ ಕಾಡಿತ್ತು
ದಿನದ ಬೈಗಿನಲ್ಲಿ ನೀನು ಮತ್ತೆ ಬರೀ ನೆನಪು ದಾನಮ್ಮ
ರಕ್ಕಸರಿಗೆ ದುಸ್ವಪ್ನವಾಗಿ ಬಾ ಹೆತ್ತೊಡಲು ಇಂದು
ಬೆಂಕಿಯಲ್ಲಿ ಬೇಯುತಿರೆ
ಉಡಿಯ ಮತ್ತೊಮ್ಮೆ ತುಂಬು ಬಾ ಬೇಗ ಬಾ
Next Story