ಕುಸ್ತಿಪಟು ಸುಶೀಲ್ ಕುಮಾರ್ ಕಾಮನ್ ವೆಲ್ತ್ ಗೆ ಡೌಟ್
ಹೊಸದಿಲ್ಲಿ, ಜ.12:ಎರಡು ಬಾರಿ ಒಲಿಂಪಿಕ್ಸ್ ನಲ್ಲಿ ಚಿನ್ನ ಜಯಿಸಿರುವ ಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್ ವಿರುದ್ಧ ಹಲ್ಲೆ ಪ್ರಕರಣದಲ್ಲಿ ದಿಲ್ಲಿ ಪೊಲೀಸರು ದೋಷಾರೋಪಣಾ ಪಟ್ಟಿ ಸಲ್ಲಿಸಿದರೆ, ಸುಶೀಲ್ ಕುಮಾರ್ ಕುಸ್ತಿಯಿಂದ ಅಮಾನತುಗೊಳ್ಳುವ ಸಾಧ್ಯತೆ ಇದೆ. ಇದರಿಂದಾಗಿ ಅವರಿಗೆ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಇತ್ತೀಚೆಗೆ ದಿಲ್ಲಿಯ ಇಂದಿರಾ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ ಗೆ ಅರ್ಹತಾ ಸ್ಪರ್ಧೆಯ ವೇಳೆ ಸುಶೀಲ್ ಕುಮಾರ್ ಮತ್ತು ಪ್ರವೀಣ್ ರಾಣಾ ಅವರ ಬೆಂಬಲಿಗರ ನಡುವೆ ಸಂಘರ್ಷ ಉಂಟಾಗಿತ್ತು. ಪ್ರವೀಣ್ ರಾಣಾ ಅವರ ಅಣ್ಣ ಸೇರಿದಂತೆ ಇತರರ ಮೇಲೆ ಸುಶೀಲ್ ಕುಮಾರ್ ಬೆಂಬಲಿಗರು ಹಲ್ಲೆ ನಡೆಸಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು.
ಸುಶೀಲ್ ಕುಮಾರ್ ಈ ಸ್ಪರ್ಧೆಯಲ್ಲಿ ಜಯಿಸಿ ಕಾಮನ್ ವೆಲ್ತ್ ಗೇಮ್ಸ್ ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರೂ, ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡುವ ಹಿನ್ನೆಲೆಯಲ್ಲಿ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪದಕದ ಬೇಟೆಗೆ ಸಮಸ್ಯೆ ಉಂಟಾಗಿದೆ