ಕತ್ತಲು ಕವಿದ ಮನೆ
ಇಲ್ಲಿ ರೋದನಕ್ಕೆ ಮರುಗುವ ಹೃದಯವಿಲ್ಲ
ಬತ್ತಿದ ಹೃದಯದಲ್ಲಿ ಕಣ್ಣೀರು ಹುಡುಕಬೇಡಿ
ಬೆಂಕಿ-ರಕ್ತ ಅಂಟಿಕೊಂಡ ನನ್ನೂರಿಗೆ
ಹಳ್ಳಿ-ಪಟ್ಟಣದ ಹಂಗಿಲ್ಲ ಹತ್ಯೆಗೆ
ಪ್ರೀತಿಗಿರುವುದು ಇಲ್ಲಿ ಒಂದೇ ಅರ್ಥ
ದ್ವೇಷಕ್ಕೆ ಮಿತಿ ಮೀರಿದ ವ್ಯಾಖ್ಯಾನವಿದೆ
ಬಣ್ಣದಲ್ಲೂ ಧರ್ಮ ಕಂಡವರಿಗೆ
ರಕ್ತದ ಬಣ್ಣದ ಬೇಧವಿಲ್ಲ ನೋಡಿ
ಮತದ ಬೇಟೆ ಶುರುವಾದ ಮೇಲೆ
ಯಾರ ಮನೆ, ಮಗ, ಮಗಳಾದರೇನು
ಉಸಿರು ನಿಂತ ಮೇಲಷ್ಟೇ
ಅವರು ನಮ್ಮವರೆಂಬ ಅಕ್ಕರೆ
ಕತ್ತಲು ಕವಿದ ಮನೆಗೆ
ಭೇಟಿ ನೀಡುವುದಾದರೂ ಹೇಗೆ
ನೆತ್ತರು ಹರಿದ ನಡು ಬೀದಿಯಲಿ
ನನ್ನ ಮೌನ ಅಪರಾಧಿಯಾದ ಮೇಲೆ
-ಅಕ್ಬರ್ ಅಲಿ, ಕಾವಳಕಟ್ಟೆ
Next Story