ಸೊರಬ : ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ
ಸೊರಬ,ಜ.12 : ಸ್ವಾಮಿ ವಿವೇಕಾನಂದರು ಯುವಕರಿಗೆ ಉತ್ತಮ ಮಾದರಿಯಾಗಿದ್ದು, ಸಹಿಷ್ಣುತೆಯನ್ನು ದೇಶಕ್ಕೆ ಪರಿಚಯಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆಂದು ಪಟ್ಟಣದ ಹಿರಿಯ ಸಿವಿಲ್ ನ್ಯಾಯಾಧೀಶೆ ಆರ್. ಉಷಾರಾಣಿ ತಿಳಿಸಿದ್ದಾರೆ.
ಶುಕ್ರವಾರ ಪಟ್ಟಣದ ಉರ್ದು ಪ್ರೌಢ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಸರ್ಕಾರಿ ಉರ್ದು ಪ್ರೌಢ ಶಾಲೆ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನಾದ್ಯಂತ ಸ್ವಾಮಿ ವಿವೇಕಾನಂದರು ಯುವಕರಿಗೆ ಪ್ರರಣೆಯಾಗಿದ್ದಾರೆ. ಎಲ್ಲಾ ಧರ್ಮಗಳು ಒಳ್ಳೆಯದನ್ನೇ ಭೋದಿಸುತ್ತವೆ. ಸಂಭವಿಸಬಹುದಾದ ತಪ್ಪುಗಳಿಂದ ಪ್ರತಿಯೊಬ್ಬರು ದೂರವಿದ್ದು, ನೆಲದ ಕಾನೂನಿಗೆ ಗೌರವಿಸಬೇಕಾಗಿದೆ. ಒಳ್ಳೆಯ ವಿಷಯಗಳಲ್ಲಿ ಒಬ್ಬರೂ ಇನ್ನೊಬ್ಬರನ್ನು ಅನುಸರಿಸಬೇಕಾಗಿದ್ದು, ಶಾಲಾ ಹಂತಗಳಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಅನುಸರಣೆ ಮಾಡಿಕೊಳ್ಳಬೇಕಾಗಿದೆ. ಪ್ರಪಂಚದ ಹದಿನೆಂಟು ರಾಷ್ಟ್ರಗಳಲ್ಲಿ ಇತರೆ ದಿನಗಳಂದು ರಾಷ್ಟ್ರೀಯ ಯುವ ದಿನಾಚರಣೆ ಮಾಡಲಾಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಮಂಜುನಾಥ್ ಮಾತನಾಡಿ ನಮ್ಮ ಸುತ್ತಮುತ್ತಲಿನ ಆದರ್ಶ ವ್ಯಕ್ತಿಗಳಿಂದ ಪ್ರೇರಿತರಾಗಿ ಪ್ರತಿಯೊಬ್ಬರು ಬದಲಾಗಲು ಪ್ರಯತ್ನಸಬೇಕು. ಜಾತಿ, ಧರ್ಮವನ್ನು ಮೀರಿ ಜೀವನ ನಡೆಸುವಂತರಾಗಬೇಕು. ಉತ್ತಮ ಸಮಾಜದ ನಿರ್ಮಾಣದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ, ವಿದ್ಯಾರ್ಥಿಗಳು ದೇಶದ ಭವಿಷವಾಗಿದ್ದು, ಸದೃಢ ಭಾರತ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದರು.
ಕಾರ್ಯಕ್ರಮದಲ್ಲಿ ವಕೀಲ ವಿನಯ್ ಪಾಟೀಲ್ ವಿಶೇಷ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಗುರುನಾಥ ಎಂ. ಪಾಟೀಲ್ ವಹಿಸಿದ್ದರು. ಎಸ್ಡಿಎಂಸಿ ಕಾರ್ಯಾಧ್ಯಕ್ಷ ಯು. ಫಯಾಜ್ ಅಹ್ಮದ್, ಸಹಾಯಕ ಸರ್ಕಾರಿ ಅಭಿಯೋಜಕ ಸಂಜೀವ್ ಎಸ್ ಜೋಷಿ, ಮುಖ್ಯ ಶಿಕ್ಷಕ, ಹೆಚ್. ಸುಭಾಷ್ ಚಂದ್ರ, ವಕೀಲ ಎಸ್. ಓಂಕಾರಪ್ಪ, ಬಿಆರ್ಪಿ ಶೇಖರ್ ನಾಯ್ಕ್, ಶಿಕ್ಷಕರಾದ ಕೆ.ಎಸ್. ರಮೇಶ್, ಅಲ್ಲಾಬಕ್ಷ್ ಹೊಸಳ್ಳಿ ಮತ್ತಿತರರಿದ್ದರು.