ಲೇಖಕ ಪಾರ್ವತೀಶಗೆ ನ್ಯಾಯಾಲಯ ಬಂಧನ ವಾರಂಟ್
ರಾಘವೇಶ್ವರ ಭಾರತಿ ಸ್ವಾಮೀಜಿ ಬಗ್ಗೆ ಮಾನಹಾನಿಕರ ಲೇಖನ
ಮಂಗಳೂರು, ಜ. 12: ರಾಘವೇಶ್ವರ ಭಾರತಿ ಸ್ವಾಮೀಜಿಯವರ ಬಗ್ಗೆ ಲಂಕೇಶ್ ಪತ್ರಿಕೆಯಲ್ಲಿ 2009ರಲ್ಲಿ ಮಾನಹಾನಿಕರ ಲೇಖನವನ್ನು ಬರೆದ ಲೇಖಕ ಪಾರ್ವತೀಶ ಎಂಬಾತನಿಗೆ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದೆ.
ಲೇಖಕ ಪಾರ್ವತೀಶ ಹಾಗೂ ಪ್ರಕಟಿಸಿದ ಗೌರಿ ಲಂಕೇಶ್ ವಿರುದ್ಧ ತಿರುಮಲೇಶ್ವರ ಪ್ರಸನ್ನ ಎಂಬವರು ಬೆಳ್ತಂಗಡಿ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ನ್ಯಾಯಾಲಯ ಆರೋಪಿ ಪಾರ್ವತೀಶ ವಿರುದ್ಧ ಜಾಮೀನು ರಹಿತ ಬಂಧನದ ವಾರಂಟ್ ಹೊರಡಿಸಿದೆ. ಆರೋಪಿ ಪಾರ್ವತೀಶ ಈ ಬಗ್ಗೆ ಮಂಗಳೂರಿನ ಮೂರನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಇತ್ತೀಚೆಗೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಗೆ ವಕೀಲರ ಮುಖಾಂತರ ದೂರುದಾರ ತಿರುಮಲೇಶ್ವರ ಪ್ರಸನ್ನ ಅವರು ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪರಿಶೀಲಿಸಿ ಎರಡೂ ಕಡೆಯ ವಾದವನ್ನು ಆಲಿಸಿದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ. ಮುರಳೀಧರ್ ಪೈ ಅವರು ಆರೋಪಿ ಪಾರ್ವತೀಶ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ. ದೂರುದಾರ ತಿರುಮಲೇಶ್ವರ ಪ್ರಸನ್ನ ಅವರ ಪರ ಮಂಗಳೂರಿನ ನ್ಯಾಯವಾದಿ ಕೆ. ಎಸ್. ಎನ್. ರಾಜೇಶ್, ಸೌಮ್ಯಾ ಎಂ. ರವಿಶಂಕರ್ ಸಿ. ವಾದಿಸಿದ್ದರು.