ಗಂಗೊಳ್ಳಿಯಲ್ಲಿ ಮತ್ತೆ ದ್ವಿಚಕ್ರ ವಾಹನಕ್ಕೆ ಬೆಂಕಿ: ಓರ್ವನ ಬಂಧನ
ಗಂಗೊಳ್ಳಿ, ಜ.13: ಗಂಗೊಳ್ಳಿಯಲ್ಲಿ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚುವ ಪ್ರಕರಣ ಮುಂದುವರೆದಿದ್ದು, ಇಂದು ನಸುಕಿನ ವೇಳೆ ದಾಕುಹಿತ್ಲು ಟಕಿಯಾ ಮೊಹಲ್ಲಾ ಎಂಬಲ್ಲಿ ಮತ್ತೊಂದು ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಈ ಸಂಬಂಧ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಗಂಗೊಳ್ಳಿ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸಿದ್ದಾರೆ.
ಬಂಧಿತನನ್ನು ದಾಕುಹಿತ್ಲುವಿನ ಗುರುರಾಜ್ ಖಾರ್ವಿ (28) ಎಂದು ಗುರುತಿಸಲಾಗಿದೆ.
ಈತ ಇಂದು ನಸುಕಿನ ವೇಳೆ ಮೇಲ್ಗಂಗೊಳ್ಳಿಯ ಮಸೀದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಾಕುಹಿತ್ಲುವಿನ ನಯೀಮ್ ಎಂಬವರ ಮನೆ ಮುಂದೆ ನಿಲ್ಲಿಸಲಾದ ಅವರ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದನು. ಈ ಕುರಿತು ಕಾರ್ಯಾಚರಣೆ ನಡೆಸಿದ ಗಂಗೊಳ್ಳಿ ಪೊಲೀಸರು ಆರೋಪಿ ಗುರುರಾಜ್ ಖಾರ್ವಿಯನ್ನು ಒಂದು ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾದರು. ಆರೋಪಿಯ ಮನೆ ನಯೀಮ್ ಅವರ ಮನೆಯಿಂದ 200 ಮೀಟರ್ ದೂರದಲ್ಲಿದೆ ಎಂದು ತಿಳಿದುಬಂದಿದೆ.
‘ಆರೋಪಿಯ ವಿಚಾರಣೆ ಮುಂದುವರಿದಿದ್ದು, ಈ ಹಿಂದೆ ಎರಡು ಬೈಕ್ ಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೂ ಆರೋಪಿಗೆ ಯಾವುದೇ ಸಂಬಂಧ ಇಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗಿನ ಜಾವ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ಭೇಟಿ ನೀಡಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಜ. 7ರಂದು ತಡರಾತ್ರಿ ಗಂಗೊಳ್ಳಿ ಜಾಮೀಯ ಮಸೀದಿಯ ಹಿಂಬದಿಯ ಅಬ್ದುಲ್ ಮಜೀದ್ ಎಂಬವರ ಬೈಕಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟಿದ್ದರು. ಜ.9ರಂದು ಬೆಳಗಿನ ಜಾವ ಗಂಗೊಳ್ಳಿಯ ಮೀನು ಮಾರುಕಟ್ಟೆ ರಸ್ತೆ ಸಮೀಪದ ಗೋಪಾಲ ಶೇರಿಗಾರ್ ಎಂಬವರ ಮನೆಯ ಮೇಲಂತಸ್ತಿನ ಬಾಡಿಗೆ ಮನೆಯಲ್ಲಿರುವ ಬದ್ರುದ್ದೀನ್ ಎಂಬವರ ಬೈಕ್ಗೆ ಕಿಡಿಗೇಡಿಗಳು ಬೆಂಕಿ ಹಾಕಿ ಪರಾರಿಯಾಗಿದ್ದರು.