ಚಾರ ಮಹಿಷಾಮರ್ಧಿನಿ ದೇವಸ್ಥಾನಕ್ಕೆ ಆಡಳಿತಾಧಿಕಾರಿ ನೇಮಕ: ಪೊಲೀಸ್ ಭದ್ರತೆಯಲ್ಲಿ ಅಧಿಕಾರ ಪಡೆದ ಗ್ರಾಮಲೆಕ್ಕಾಧಿಕಾರಿ
ಹೆಬ್ರಿ, ಜ.13: ಸರಕಾರದ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮಾದಾಯ ಧತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಚಾರ ಮಹಿಷಮರ್ಧಿನಿ ದೇವಸ್ಥಾನಕ್ಕೆ ಉಡುಪಿ ಜಿಲ್ಲಾ ಧಾರ್ಮಿಕ ದತ್ತಿ ಆಯುಕ್ತರು ಆಡಳಿತಾಧಿಕಾರಿ ನೇಮಿಸುವಂತೆ ಆದೇಶ ಹೊರಡಿಸಿದ್ದು ಶುಕ್ರವಾರ ರಾತ್ರಿ ಹೆಬ್ರಿ ಮತ್ತು ಚಾರದ ಗ್ರಾಮ ಲೆಕ್ಕಾಧಿಕಾರಿ ದೇವಾಲಯದ ಆಡಳಿತವನ್ನು ಸ್ವಾಧೀನ ಪಡಿಸಿಕೊಂಡರು.
ಕಳೆದ ಹಲವು ವರ್ಷಗಳಿಂದ ಚಾರ ರತ್ನಾಕರ ಶೆಟ್ಟಿ ಎಂಬವರು ತನ್ನದೇ ತಂಡದೊಂದಿಗೆ ದೇವಸ್ಥಾನದ ಆಡಳಿತ ನಡೆಸುತ್ತಿದ್ದರು. ಸ್ಥಳೀಯರು ಮತ್ತು ಗ್ರಾಮಸ್ಥರು ರತ್ನಾಕರ ಶೆಟ್ಟಿ ಆಡಳಿತದ ವಿರುದ್ಧ ಅಸಮಾಧಾನಗೊಂಡು, ಚಾರ ಗ್ರಾಮದ ಸೀತಾರಾಮ ಹೆಗ್ಡೆ ಹಾಗೂ ಇತರರು ದೇವಸ್ಥಾನಕ್ಕೆ ಹೊಸ ವ್ಯವಸ್ಥಾಪನಾ ಸಮಿತಿ ರಚಿಸುವಂತೆ ಮನವಿ ಮಾಡಿಕೊಂಡಿತ್ತು.
ಮನವಿಯಂತೆ ಧಾರ್ಮಿಕ ದತ್ತಿ ಆಯುಕ್ತರು ಸಮಿತಿಯನ್ನು ರಚಿಸುವಂತೆ ಪ್ರಕಟಣೆ ಹೊರಡಿಸಿದ್ದರು. ಚಾರ ರತ್ನಾಕರ ಶೆಟ್ಟಿ ಆಯುಕ್ತರ ಪ್ರಕಟಣೆ ವಿರುದ್ಧ ಹೈಕೋರ್ಟಿನಿಂದ ತಡೆಯಾಜ್ಞೆ ತಂದಿದ್ದರು. ಇದೀಗ ಜ.14ರಂದು ಕಾರಣಿಕ ಚಾರದ ಹಬ್ಬ ನಡೆಯಲಿದ್ದು, ಜಾತ್ರೆಯು ವ್ಯವಸ್ಥಿತವಾಗಿ ನಡೆಯುವಂತೆ ಆಡಳಿತಾಧಿಕಾರಿ ನೇಮಕ ಮಾಡುವಂತೆ ಆಯುಕ್ತರ ಆದೇಶದಂತೆ ಶುಕ್ರವಾರ ಚಾರ ದೊಡ್ಡಮನೆ ರತ್ನಾಕರ ಶೆಟ್ಟಿ ಅನುಪಸ್ಥಿತಿಯಲ್ಲಿ ವಿಡಿಯೋ ದಾಖಲೆಯ ಮೂಲಕ ಮಹಜರು ನಡೆಸಿ ಗ್ರಾಮ ಲೆಕ್ಕಾಧಿಕಾರಿ ವಿವಿಧ ವಸ್ತುಗಳನ್ನು ಸ್ವಾಧೀನ ಪಡಿಸಿಕೊಂಡು ಪೊಲೀಸ್ ಭದ್ರತೆಯಲ್ಲಿ ಬಳಿಕ ಮುಂದಿನ ಧಾರ್ಮಿಕ ಕೈಕಂರ್ಯಕ್ಕೆ ಅರ್ಚಕರಿಗೆ ಹಸ್ತಾಂತರ ಮಾಡಿದರು.
ದೇವಸ್ಥಾನದ 3 ಕೋಣೆಗಳ ಕೀ ಶುಕ್ರವಾರ ದೊರೆಯದ ಕಾರಣ ರಾತ್ರಿ ಪೊಲೀಸ್ ಕಾವಲು ಹಾಕಲಾಗಿತ್ತು. ಹೈಕೋರ್ಟಿನಲ್ಲಿ ಪ್ರಕರಣ ಇತ್ಯರ್ಥವಾದ ಬಳಿಕ ನೂತನ ವ್ಯವಸ್ಥಾಪನಾ ಸಮಿತಿ ಅಸ್ವಿತ್ವಕ್ಕೆ ಬರಲಿದೆ ಎಂದು ತಿಳಿದುಬಂದಿದೆ.
ಚಾರ ಹಬ್ಬ
ಚಾರ ಮಹಿಷಮರ್ಧಿನಿ ದೇವಸ್ಥಾನದ ವಾರ್ಷಿಕ ಜಾತ್ರೆ ಚಾರದ ಹಬ್ಬ, ಕೆಂಡೋತ್ಸವ, ಮಕರ ಸಂಕ್ರಮಣ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ರವಿವಾರ ನಡೆಯಲಿದೆ ಆಡಳಿತಾಧಿಕಾರಿ ಗಣೇಶ್ ಕುಲಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.