ಬಿಜೆಪಿಯ ಹಿಂದುತ್ವದ ಅಜೆಂಡ ಅನಾವರಣ: ಹನೀಫ್ ಖಾನ್
ಹಜ್ ಯಾತ್ರಿಗಳಿಗೆ ಸಬ್ಸಿಡಿ ಸ್ಥಗಿತ
ಬಂಟ್ವಾಳ, ಜ. 17: ಹಜ್ ಯಾತ್ರಿಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಕೇಂದ್ರ ಸರಕಾರ ಸ್ಥಗಿತಗೊಳಿಸಿರುವ ಹಿಂದೆ ಬಿಜೆಪಿಯ ಹಿಂದುತ್ವದ ಅಜೆಂಡಾವನ್ನು ಅನಾವರಣಗೊಳಿಸಿದೆ ಎಂದು ಎಸ್ಡಿಪಿಐ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಆರೋಪಿಸಿದ್ದಾರೆ.
ಮೋದಿ ನೇತೃತ್ವದ ಕೇಂದ್ರ ಸರಕಾರ ಸಬ್ ಕ ಸಾತ್, ಸಬ್ ಕ ವಿಕಾಸ್ ಎಂದು ಹೇಳಿ ಕೇವಲ ಶ್ರೀಮಂತರನ್ನು ವಿಕಾಸ್ ಮಾಡುವ ಮೂಲಕ ಬಡವರ್ಗ ಹಾಗೂ ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿವೆ. ಅಲ್ಪಸಂಖ್ಯಾತರಿಗಾಗಿ ಜಾರಿಗೊಳಿದ್ದ ಯೋಜನೆಯನ್ನು ಒಂದೊಂದಾಗಿ ಕಿತ್ತೊಗೆಯುವ ಮೂಲಕ ಮುಸ್ಲಿಮ್ ಸಮುದಾಯವನ್ನು ದಮನಿಸುತ್ತಿದೆ. ಇದು ಖಂಡನಾರ್ಯ ಎಂದರು.
ಆಹಾರ ಸಚಿವ ಯು.ಟಿ.ಖಾದರ್ ಅವರು ಹಜ್ ಯಾತ್ರಿಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿಯ ಸ್ಥಗಿತಕ್ಕೆ ಸ್ವಾಗತಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಬ್ಸಿಡಿ ಯಿಂದ ಏರ್ ಇಂಡಿಯಾಕ್ಕೆ ಲಾಭವಾಗುತ್ತಿತ್ತೇ ಹೊರತು ವೈಯಕ್ತಿಕವಾಗಿ ಯಾತ್ರಿಕರಿಗೆ ಯಾವುದೇ ಲಾಭ ಇಲ್ಲ ಹೇಳಿರುವ ಸಚಿವರು, ಈ ಮೊದಲು ಕೇಂದ್ರ ದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರವಿರುವಾಗ ಯಾಕೆ ಸ್ಥಗಿತಗೊಳಿಸಿಲ್ಲ. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವೂ ಬಿಜೆಪಿ ಸಿದ್ಧಾಂತವನ್ನು ಅನುಸರಿಸುತ್ತಾ ಮೃದು ಹಿಂದುತ್ವದತ್ತ ಕೈಜೋಡಿಸುತ್ತಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.