ಲೋಕಸಭಾ ಚುನಾವಣೆಯಲ್ಲಿ ವೇಮುಲಾ ತಾಯಿ ಸ್ಪರ್ಧಿಸಲಿ: ಜಿಗ್ನೇಶ್ ಮೇವಾನಿ
"ಮನು-ಸ್ಮೃತಿ ಇರಾನಿಗೆ ಪಾಠ ಕಲಿಸಬೇಕಿದೆ"
ಹೈದರಾಬಾದ್, ಜ.18: ಹೈದರಾಬಾದ್ ಕೇಂದ್ರೀಯ ವಿವಿಯ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾರ ತಾಯಿ ರಾಧಿಕಾ ವೇಮುಲಾ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕು. ಮನು-ಸ್ಮೃತಿ ಇರಾನಿಗೆ ಪಾಠ ಕಲಿಸಬೇಕು ಎಂದು ಗುಜರಾತ್ ರಾಜ್ಯದ ನೂತನ ಶಾಸಕ ಹಾಗೂ ದಲಿತ ನಾಯಕ ಜಿಗ್ನೇಶ್ ಮೇವಾನಿ ಟ್ವೀಟ್ ಮಾಡಿದ್ದಾರೆ.
ರೋಹಿತ್ ವೇಮುಲಾರ ಎರಡನೇ ಪುಣ್ಯತಿಥಿ ಸಮಾರಂಭದಲ್ಲಿ ಭಾಗವಹಿಸಲು ಇಂದು ಹೈದರಾಬಾದ್ ನಗರಕ್ಕೆ ಬಂದಿರುವ ಮೇವಾನಿ, ರಾಧಿಕಾ ಅವರನ್ನು ಭೇಟಿಯಾಗಿದ್ದಾರೆ. ತೆಲಂಗಾಣ ಸರಕಾರದಿಂದ ಬಂಧಿತರಾಗಿ ಚೆಂಚಲಗುಡ ಕಾರಾಗೃಹದಲ್ಲಿರುವ ಪರಿಶಿಷ್ಟ ಜಾತಿಗಳ ನಾಯಕ ಮಂದ ಕೃಷ್ಣ ಮಾದಿಗರನ್ನೂ ಭೇಟಿಯಾಗಿ ಅವರಿಗೆ ತಮ್ಮ ನೈತಿಕ ಬೆಂಬಲ ಘೋಷಿಸಿದರು.
ಕರ್ನಾಟಕ ವಿಧಾನಸಭಾ ಚುನಾವಣೆಗೆ ತಾನು ಮತ್ತು ರಾಧಿಕಾ ವೇಮುಲಾ ಪ್ರಚಾರ ಕಾರ್ಯದಲ್ಲಿ ತೊಡಗಿ ಬಿಜೆಪಿ ಮತ್ತು ಸಂಘ ಪರಿವಾರ ಸೋಲುವಂತೆ ಮಾಡುವುದಾಗಿ ಅವರು ತಿಳಿಸಿದರು. ದೇಶಾದ್ಯಂತ ದಲಿತರ ಮೇಲಾಗುತ್ತಿರುವ ದೌರ್ಜನ್ಯಗಳಿಗೆ ನರೇಂದ್ರ ಮೋದಿ ಸರಕಾರ ಬೆಲೆ ತೆರಬೇಕಾಗುವುದು. ದಲಿತ ಚಳವಳಿಯನ್ನು ದೇಶಾದ್ಯಂತ ಪಸರಿಸುವುದಾಗಿಯೂ ಅವರು ಘೋಷಿಸಿದರು.