ಜಾತಿ ಆಧಾರಿತ ರಾಜಕಾರಣಕ್ಕೆ ವಿರೋಧ: ಜ.21 ರಂದು ಪಾದಯಾತ್ರೆ
ಮಡಿಕೇರಿ, ಜ.18 :ಇತ್ತೀಚಿನ ದಿನಗಳಲ್ಲಿ ಕೊಡಗಿನ ಅಭಿವೃದ್ಧಿಗೆ ಮಾರಕವಾಗುವ ರೀತಿಯಲ್ಲಿ ಜಾತಿ ಆಧಾರಿತ ರಾಜಕೀಯ ನಡೆಯುತ್ತಿದೆ ಎಂದು ಜನಪರ ಹೋರಾಟ ಸಮಿತಿಯ ಸಂಚಾಲಕರಾದ ಬಲ್ಲಾರಂಡ ಮಣಿ ಉತ್ತಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಾತಿ ಆಧಾರದಲ್ಲಿ ಟಿಕೆಟ್ ಬೇಡಿಕೆ ಇಡುವುದರ ವಿರುದ್ಧ ಜನ ಜಾಗೃತಿ ಮೂಡಿಸಲು ಜ.21 ರಂದು ತಲಕಾವೇರಿಯಿಂದ ಮಡಿಕೇರಿಯ ಶ್ರೀಓಂಕಾರೇಶ್ವರ ದೇವಸ್ಥಾನದವರೆಗೆ ಪಾದಯಾತ್ರೆ ನಡೆಸುವುದಾಗಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವೆಲ್ಲರು ಭಾರತೀಯರು ಎನ್ನುವ ಮನೋಭಾವನೆಯನ್ನು ಸೃಷ್ಟಿಸುವ ಅಗತ್ಯವಿದ್ದು, ಇದಕ್ಕೆ ಅಡ್ಡಿಯಾಗಿರುವ ಜಾತಿ ಆಧಾರಿತ ರಾಜಕಾರಣಕ್ಕೆ ಕಡಿವಾಣ ಹಾಕುವ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ಕೊಡಗಿನಲ್ಲಿ ಕೇವಲ ಕೊಡವ ಹಾಗೂ ಗೌಡ ಜನಾಂಗದವರು ಚುನಾವಣೆಗೆ ಟಿಕೆಟ್ ಪಡೆಯಬೇಕೆನ್ನುವ ಬಯಕೆ ಅರ್ಥಹೀನವೆಂದ ಅವರು ರಾಜಕೀಯ ಪಕ್ಷಗಳು ಜನರ ಆಶೋತ್ತರಗಳನ್ನು ಈಡೇರಿಸುವ ಸೂಕ್ತ ವ್ಯಕ್ತಿಗಳಿಗೆ ಜಾತಿ ರಹಿತವಾಗಿ ಟಿಕೆಟ್ ನೀಡಬೇಕೆಂದರು. ಜಾತಿ ಆಧಾರದಲ್ಲಿ ಕೊಡಗಿನ ಜನತೆಯನ್ನು ಒಡೆಯುವ ಕೆಲಸಗಳು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದ್ದು, ಸಾಮರಸ್ಯಕ್ಕೆ ಇದು ಧಕ್ಕೆಯನ್ನುಂಟು ಮಾಡುವ ಸಾಧ್ಯತೆ ಇದೆ. ಕೊಡಗಿನಲ್ಲಿ ಹುಟ್ಟಿ ಬೆಳೆದಿರುವ ಪ್ರತಿಯೊಬ್ಬರು ಕೊಡಗಿನ ಜನರಾಗಿದ್ದು, ರಾಷ್ಟ್ರ, ರಾಜ್ಯ , ಜಿಲ್ಲೆ, ನೆಲ, ಜಲ ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ತೋರುವ ವ್ಯಕ್ತಿಗಳಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು.
ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ಜಾತಿ ಆಧಾರದಲ್ಲಿ ಮತ ಗಳಿಕೆಗೆ ಮತದಾರರ ಮನವೊಲಿಸುವ ಪ್ರಯತ್ನ ಜಿಲ್ಲೆಯಾದ್ಯಂತ ನಡೆಯುತ್ತಿದ್ದು, ಇದಕ್ಕೆ ಜನರು ಮರುಳಾಗದೆ ಜನಸೇವೆಯ ಆದ್ಯತೆಯ ವ್ಯಕ್ತಿಗಳಿಗೆ ಮತ ನೀಡಬೇಕೆಂದರು.
ಜ.21 ರಂದು ಬೆಳಗ್ಗೆ 8 ಗಂಟೆಗೆ ಕಾವೇರಿ ನದಿಯ ಉಗಮ ಸ್ಥಾನವಾದ ತಲಕಾವೇರಿಯಿಂದ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಸ್ಥಾನದವರೆಗೆ ತಮ್ಮ ನೇತೃತ್ವದಲ್ಲಿ ಜನಪರ ಹೋರಾಟ ಸಮಿತಿ ವತಿಯಿಂದ ಪಾದಯಾತ್ರೆ ನಡೆಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜನಪರ ಹೋರಾಟ ಸಮಿತಿಯ ಖಜಾಂಚಿ ಧನಂಜಯ್ ಹಾಗೂ ಸದಸ್ಯ ಸೋಮೇಶ್ ಉಪಸ್ಥಿತರಿದ್ದರು.