ತುಮಕೂರಿನಲ್ಲಿ ಮನೆಗೆ ನುಗ್ಗಿದ ಚಿರತೆ
ಸಾಂದರ್ಭಿಕ ಚಿತ್ರ
ತುಮಕೂರು, ಜ.20: ತುಮಕೂರಿನ ಜಯನಗರದಲ್ಲಿ ಚಿರತೆಯೊಂದು ಮನೆಯೊಳಗೆ ನುಗ್ಗಿದ ಘಟನೆ ಶನಿವಾರ ನಡೆದಿದೆ.
ಬೆಳಗ್ಗೆ 9 ಗಂಟೆಯ ಹೊತ್ತಿಗೆ ರಂಗನಾಥ್ ಎಂಬವರ ಮನೆಗೆ ಚಿರತೆ ನುಗ್ಗಿದೆ. ಬಾಗಿಲು ಬಳಿ ಸದ್ದಾಗುತ್ತಿದ್ದಂತೆ ರಂಗನಾಥ್ ಅವರ ಸೊಸೆ ಬಾಗಿಲು ತೆರದಿದ್ದಾರೆ. ಆಗ ಮನೆಯೊಳಕ್ಕೆ ನುಗ್ಗಿದ ಚಿರತೆ ಅಡುಗೆ ಕೋಣೆ ಕಡೆಗೆ ಓಡಿದ್ದು, ಅಡುಗೆ ಕೋಣೆಯ ಅಟ್ಟದಲ್ಲಿ ಅವಿತುಕೊಂಡಿದೆ ಎನ್ನಲಾಗಿದೆ.
ಚಿರತೆ ಮನೆಗೆ ನುಗ್ಗಿರುವ ಹಿನ್ನೆಲೆಯಲ್ಲಿ ಮನೆಯೊಳಗಿದ್ದ ಇಬ್ಬರು ಮಹಿಳೆಯರು ತಮ್ಮನ್ನು ರಕ್ಷಿಸಿಕೊಳ್ಳಲು ಮನೆಯ ಶೌಚಾಲಯದೊಳಗೆ ಓಡಿ ಹೋಗಿ
ಬಾಗಿಲು ಹಾಕಿ ಕುಳಿತುಕೊಂಡಿದ್ದಾರೆ. ಅವರನ್ನು ಪಾರು ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದೆ ಎಂದು ತಿಳಿದು ಬಂದಿದೆ.
ಇದೇ ವೇಳೆ ಮನೆಯೊಳಗೆ ಅಡಗಿ ಕುಳಿತಿರುವ ಚಿರತೆಯನ್ನು ಹಿಡಿಯಲು ಪೊಲೀಸರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.
Next Story