ಮಂಗಳೂರಿಗೆ ಆಗಮಿಸಿದ ಮಾಜಿ ಪ್ರಧಾನಿ ದೇವೇಗೌಡ: ದೀಪಕ್ ಮನೆಗೆ ಭೇಟಿ
ಮಂಗಳೂರು, ಜ. 21: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕಾಟಿಪಳ್ಳದ ದೀಪಕ್ ರಾವ್ ಅವರ ಮನೆಗೆ ರವಿವಾರ ಭೇಟಿ ನೀಡಿದರು.
ದೀಪಕ್ ಅವರ ತಾಯಿಗೆ ಸಾಂತ್ವನ ಹೇಳಿದ ಅವರು, ಘಟನೆ ನಡೆದ ಸಂದರ್ಭದಲ್ಲೇ ಭೇಟಿ ನೀಡಬೇಕೆಂದು ಬಯಸಿದ್ದೆ. ಬರಲು ಸಾಧ್ಯವಾಗಲಲ್ಲಿ ಎಂದರು.
ದೀಪಕ್ ಕುಟುಂಬದ ಸದ್ಯದ ಸ್ಥಿತಿಗಳ ಕುರಿತು ಹತ್ತಿರದಲ್ಲೇ ಕುಳಿತಿದ್ದ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್ ಅವರಿಂದ ಮಾಹಿತಿ ಪಡೆದು ಕೊಂಡರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೀಪಕ್ ರಾವ್ ಅವರ ತಾಯಿಗೆ ಸಮಾಧಾನದ ಮಾತುಗಳನ್ನು ಹೇಳಿದ್ದೇನೆ. ದುಃಖದಲ್ಲಿರುವ ಅವರಿಗೆ ಹೆಚ್ಚೇನೂ ಹೇಳಲು ಆಗುವುದಿಲ್ಲ ಎಂದರು.
ಭೇಟಿಯ ಸಂದರ್ಭದಲ್ಲಿ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್, ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ, ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ, ಜಿಲ್ಲಾ ಉಪಾಧ್ಯಕ್ಷ ರಘುನಾಥ್ ಪೈ, ಕಾರ್ಯಾಧ್ಯಕ್ಷ ರಾಮ ಗಣೇಶ್, ಯುವ ಜನತಾದಳ ದ.ಕ. ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ಹಮ್ಮಬ್ಬ, ಉಪೇಂದ್ರ ನಾಯಕ್, ಮುಮ್ತಾಝ್ ಅಲಿ ಮೊದಲಾದವರು ಉಪಸ್ಥಿತರಿದ್ದರು.