ರಾಷ್ಟ್ರಧ್ವಜದ ಹೆಸರಲ್ಲಿ ರಾಷ್ಟ್ರದ್ರೋಹ
ಉತ್ತರ ಪ್ರದೇಶದ ಕಾಸಗಂಜ್ನಲ್ಲಿ ಸಂಘಪರಿವಾರದ ಕಾರ್ಯಕರ್ತರು ರಾಷ್ಟ್ರ ಧ್ವಜವನ್ನು ಹಿಡಿದುಕೊಂಡೇ ರಾಷ್ಟ್ರದ್ರೋಹದ ಕೆಲಸ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ. ಆರಂಭದಲ್ಲಿ ಈ ಕುರಿತಂತೆ ಎಲ್ಲ ಮಾಧ್ಯಮಗಳೂ ವದಂತಿಗಳನ್ನೇ ಸುದ್ದಿಯಾಗಿ ಪ್ರಕಟಿಸಿದ್ದವು. ಟಿವಿ ವಾಹಿನಿಗಳು ಕೂಡ ಜನರನ್ನು ದಾರಿ ತಪ್ಪಿಸಿದ್ದವು. ಜನವರಿ 26ರಂದು ಲಕ್ನೋದ ಕಾಸಗಂಜ್ನಲ್ಲಿ ಸಂಘಪರಿವಾರದ ಕಾರ್ಯಕರ್ತರು ತಿರಂಗಾ ರ್ಯಾಲಿ ನಡೆಸುತ್ತಿರುವಾಗ ಅವರ ವಿರುದ್ಧ ಮುಸ್ಲಿಮರು ದಾಳಿ ನಡೆಸಿದರು. ಈ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂಬ ಸುದ್ದಿ ದೇಶಾದ್ಯಂತ ಹರಡಿತು. ಇದಾದ ಬಳಿಕ ಕಾಸಗಂಜ್ಗಲ್ಲಿ ಮುಸ್ಲಿಮರ ಮೇಲೆ ಭಾರೀ ದಾಳಿಯೊಂದನ್ನು ಸಂಘಪರಿವಾರ ಸಂಘಟಿಸಿತು ಮತ್ತು ಅಮಾಯಕ ಮುಸ್ಲಿಮರ ಮನೆ, ಅಂಗಡಿ ಮುಂಗಟ್ಟುಗಳನ್ನು ನಾಶ ಮಾಡಿತು. ಈ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವ ಹಿಂದೂ ಪರಿಷತ್ನ ಮುಖಂಡನೊಬ್ಬ ‘‘ದೇಶದ್ರೋಹಿಗಳಿಗೆ ಕಾಸಗಂಜ್ನಲ್ಲಿ ಸರಿಯಾದ ಶಾಸ್ತಿ ಮಾಡಲಾಗಿದೆ’’ ಎಂಬ ಹೇಳಿಕೆ ನೀಡಿದ್ದಾನೆ. ಆದರೆ ಇದೀಗ ಕಾಸಗಂಜ್ನಲ್ಲಿ ನಿಜಕ್ಕೂ ನಡೆದಿರುವುದು ಏನು ಎನ್ನುವ ಸತ್ಯಾಂಶ ಹೊರಬಿದ್ದಿದೆ.
ಸಾಮಾಜಿಕ ತಾಣಗಳಲ್ಲಿ ಸಿಸಿ ಟಿವಿಯ ತುಣುಕೊಂದು ಹರಿದಾಡುತ್ತಿದ್ದು, ಇದರಲ್ಲಿ ಕಾಸಗಂಜ್ನ ಸಣ್ಣದೊಂದು ವೃತ್ತದಲ್ಲಿ ಮುಸ್ಲಿಮರು ಹುತಾತ್ಮ ಯೋಧ ಪರಮವೀರ ಚಕ್ರ ಪುರಸ್ಕೃತ ಅಬ್ದುಲ್ ಹಮೀದ್ ಅವರ ಸ್ಮರಣೆಯೊಂದಿಗೆ ಗಣರಾಜ್ಯೋತ್ಸವವನ್ನು ಆಚರಿಸಲು ಸಿದ್ಧತೆ ನಡೆಸುತ್ತಿರುವುದು ಕಂಡುಬಂದಿದೆ. ಅಷ್ಟರಲ್ಲಿ ಅಲ್ಲಿಗೆ ಬೈಕ್ಗಳಲ್ಲಿ ಬಂದ ಗುಂಪೊಂದು ದಾಂಧಲೆ ನಡೆಸಿರುವುದು ಸ್ಪಷ್ಟವಾಗಿ ದಾಖಲಾಗಿದೆ. ದಾಳಿ ನಡೆಸುತ್ತಿರುವವರ ಕೈಯಲ್ಲಿ ಕೇಸರಿ ಧ್ವಜಗಳಿದ್ದವು. ‘ತಿರಂಗಾ ರ್ಯಾಲಿ’ ಎಂದು ಹೊರಟವರ ಕೈಯಲ್ಲಿ ಕೇಸರಿ ಧ್ವಜಗಳೇಕೆ? ಗಣರಾಜ್ಯೋತ್ಸವಕ್ಕೂ ಕೇಸರಿ ಧ್ವಜಕ್ಕೂ ಏನು ಸಂಬಂಧ? ಗಣರಾಜ್ಯೋತ್ಸವ ಆಚರಿಸಲು ಸಿದ್ಧತೆ ನಡೆಸುತ್ತಿರುವ ಜನರ ಮೇಲೆ ದಾಳಿ ಮಾಡುವುದೆಂದರೆ ಗಣರಾಜ್ಯೋತ್ಸವ ಆಚರಣೆಯನ್ನು ತಡೆದಂತೆಯೇ ಅಲ್ಲವೇ? ನೆಪಕ್ಕಷ್ಟೇ ತಿರಂಗ ಧ್ವಜವನ್ನು ಹಿಡಿದುಕೊಂಡು, ಕೇಸರಿ ಧ್ವಜವನ್ನು ಜನರ ಮೇಲೆ ಹೇರಲು ಹೋಗಿರುವುದು ದೇಶದ್ರೋಹವಲ್ಲವೇ? ಇಂತಹ ಪ್ರಶ್ನೆಗಳನ್ನು ಕೇಳುತ್ತಿರುವುದು ಅನ್ಯಾಯಕ್ಕೊಳಗಾರುವ ಜನರು ಮಾತ್ರವಲ್ಲ, ಲಕ್ನೋದ ಹಿರಿಯ ಅಧಿಕಾರಿಗಳೂ ಇದನ್ನು ಜೋರು ಧ್ವನಿಯಲ್ಲಿ ಕೇಳುತ್ತಿದ್ದಾರೆ. ಕಾಸಗಂಜ್ನಲ್ಲಿ ಸಂಘಪರಿವಾರ ನಡೆಸಿದ ದಾಳಿಯನ್ನು ಸಾಮಾಜಿಕ ತಾಣದಲ್ಲಿ ಟೀಕಿಸಿದ್ದಾರೆ.
ಜನವರಿ 28ರಂದು ಬರೇಲಿ ಜಿಲ್ಲಾಧಿಕಾರಿ ಆರ್. ವಿ. ಸಿಂಗ್ ಮಾಡಿರುವ ಟ್ವೀಟ್ ಸಾಕಷ್ಟು ಚರ್ಚೆಗೊಳಗಾಯಿತು. ‘‘ಈಗ ಹೊಸ ಸಂಪ್ರದಾಯ ಶುರುವಾಗಿದೆ. ಮುಸ್ಲಿಮರು ಹೆಚ್ಚಿರುವ ಜಾಗಕ್ಕೆ ಹೋಗಿ ಅಲ್ಲಿ ಪಾಕಿಸ್ತಾನ ವಿರೋಧಿ ಘೋಷಣೆಗಳನ್ನು ಕೂಗುವುದು. ಅವರೇನು ಪಾಕಿಸ್ತಾನಿಗಳೇ’’. ಕೂಗುವವರ ಉದ್ದೇಶ ಏನು ಎನ್ನುವುದು ಸ್ಪಷ್ಟ. ತಿರಂಗಾ ರ್ಯಾಲಿಯ ಹೆಸರಿನಲ್ಲಿ ಕಾಸಗಂಜ್ನಲ್ಲಿ ಹಿಂಸಾಚಾರ ನಡೆಸುತ್ತಿರುವವರ ಬಳಿ ಪಿಸ್ತೂಲ್ಗಳಿದ್ದವು ಎನ್ನುವುದು ಸಿಸಿ ಟಿವಿ ದಾಖಲೆಗಳಲ್ಲಿ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಿರಂಗಾ ರ್ಯಾಲಿಯಲ್ಲಿ ಪಿಸ್ತೂಲ್ ಮತ್ತು ಮಾರಕಾಸ್ತ್ರಗಳಿಗೆ ಏನು ಕೆಲಸ? ಅಂದರೆ ಗಣರಾಜ್ಯೋತ್ಸವದ ಹೆಸರಿನಲ್ಲಿ, ತಿರಂಗಾ ರ್ಯಾಲಿ ನೆಪದಲ್ಲಿ ಇವರು ಸಮಾಜವನ್ನು ಒಡೆಯುವ ದೇಶದ್ರೋಹದ ಕೆಲಸಕ್ಕೆ ಇಳಿದಿದ್ದಾರೆ. ತಿರಂಗಾ ರ್ಯಾಲಿ ರಸ್ತೆಯ ಮೇಲೆ ಹೋಗಬೇಕು. ಮುಸ್ಲಿಮರು ಗಣರಾಜ್ಯೋತ್ಸವ ಆಚರಿಸುತ್ತಿರುವಾಗ ಇವರು ದೇಶಪ್ರೇಮಿಗಳೇ ಆಗಿದ್ದರೆ ಅವರ ಜೊತೆಗೆ ಸೇರಿಕೊಳ್ಳುತ್ತಿದ್ದರು. ಹುತಾತ್ಮ ಅಬ್ದುಲ್ ಹಮೀದ್ ಈ ದೇಶ ಸದಾ ಸ್ಮರಿಸಬೇಕಾದ ದೇಶಭಕ್ತ. ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಅಪ್ರತಿಮ ಸಾಹಸವನ್ನು ಪ್ರದರ್ಶಿಸಿ ಹುತಾತ್ಮರಾದವರು. ಇಂತಹ ನಾಯಕನನ್ನು ಸ್ಮರಿಸುತ್ತಾ ಗಣರಾಜ್ಯೋತ್ಸವ ಆಚರಿಸುತ್ತಿದ್ದ ಜನರ ಮೇಲೆ ಇವರು ದಾಳಿ ನಡೆಸುತ್ತಾರೆ ಎಂದಾದರೆ ಇವರ ತಿರಂಗಾ ರ್ಯಾಲಿಯನ್ನು ಬೂಟಾಟಿಕೆಯಲ್ಲವೆ? ದೇಶಕ್ಕಾಗಿ ಹೋರಾಡಿ ಮಡಿದ ಯೋಧನಿಗೂ, ಗಣರಾಜ್ಯ ದಿನಕ್ಕೂ ಅವರು ಏಕ ಕಾಲದಲ್ಲಿ ಅವಮಾನ ಮಾಡಿದ್ದಾರೆ. ಕೋಮುಗಲಭೆ ನಡೆಸುವುದಕ್ಕಾಗಿ, ಹಿಂಸಾಚಾರ ನಡೆಸುವುದಕ್ಕೆ ಗಣರಾಜ್ಯೋತ್ಸವವನ್ನು, ರಾಷ್ಟ್ರಧ್ವಜವನ್ನು ದುರ್ಬಳಕೆ ಮಾಡುವುದನ್ನು ದೇಶದ್ರೋಹವೆಂದೇ ಕರೆಯಬೇಕು.
ಇದೇ ಸಂದರ್ಭದಲ್ಲಿ ಸಹಾರನ್ ಪುರದ ಅಂಕಿಅಂಶ ಇಲಾಖೆಯ ಉಪ ನಿರ್ದೇಶಕಿಯಾಗಿರುವ ರಶ್ಮಿ ವರುಣ್ ಎಂಬವರು ಫೇಸ್ಬುಕ್ನಲ್ಲಿ ಪೋಸ್ಟೊಂ ದನ್ನು ಹಾಕಿದ್ದು, ಚಂದನ್ ಗುಪ್ತ್ತಾ ಎಂಬವರ ಕೊಲೆಯ ಹಿಂದೆ ಇರುವುದು ಸಂಘಪರಿವಾರದ ಜನರೇ ಆಗಿದ್ದಾರೆ ಎಂದು ಹೇಳಿದ್ದಾರೆ. ಈ ಹಿಂದೆ ಸಹಾರನ್ಪುರದಲ್ಲಿ ಅಂಬೇಡ್ಕರ್ ಜಯಂತಿಯ ದಿನ ಸಂಘಪರಿವಾರ ಇಂತಹದ್ದೇ ರ್ಯಾಲಿ ನಡೆಸಿತ್ತು. ಆದರೆ ಕೇಸರಿ ಧ್ವಜಗಳ ಮರೆಯಲ್ಲಿ ಅಂಬೇಡ್ಕರ್ ಸಂಪೂರ್ಣ ಮಾಯವಾಗಿದ್ದರು. ಈ ಬಾರಿಯ ತಿರಂಗಾ ರ್ಯಾಲಿಯಲ್ಲೂ ಭಗವಾಧ್ವಜವೇ ಮೆರೆದಿದೆ ಎಂದು ಅವರು ಆರೋಪಿಸಿದ್ದರು. ಆದರೆ ತೀವ್ರ ಬೆದರಿಕೆ ಎದುರಾದ ಹಿನ್ನೆಲೆಯಲ್ಲಿ ಅವರು ತಮ್ಮ ಹೇಳಿಕೆಯನ್ನು ಹಿಂದೆಗೆದುಕೊಂಡರು. ಇವರ ಹೇಳಿಕೆಯನ್ನು ಪುಷ್ಟೀಕರಿಸುವಂತೆ, ಇದೀಗ ಸಿಸಿ ಟಿವಿಯಲ್ಲಿ ಸಂಘಪರಿವಾರದ ಕಾರ್ಯಕರ್ತರು ತಿರಂಗಾ ರ್ಯಾಲಿಯಲ್ಲಿ ಗುಂಡು ಹಾರಿಸುತ್ತಿರುವುದು ಬಹಿರಂಗವಾಗಿದೆ. ಸಂಘಪರಿವಾರದ ಇಬ್ಬರು ಮುಖಂಡರು ರ್ಯಾಲಿಯನ್ನು ಪಿಸ್ತೂಲನ್ನು ಹೊಂದಿದ್ದರು. ಯದ್ವಾತದ್ವಾ ಗುಂಡು ಹಾರಿಸಿದ್ದರು. ಈ ಗುಂಡು ಆಕಸ್ಮಿಕವಾಗಿ ಅಥವಾ ಉದ್ದೇಶಪೂರ್ವಕವಾಗಿ ಚಂದನ್ಗುಪ್ತ್ತಾ ಎಂಬವರಿಗೆ ತಾಗಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಇದೀಗ ಊಹಿಸುತ್ತಿದ್ದಾರೆ. ಆದರೆ ದುರದೃಷ್ಟವಶಾತ್, ಸತ್ಯ ಸಂಗತಿ ಏನು ಎನ್ನುವುದು ತನಿಖೆಯಿಂದ ಬಹಿರಂಗವಾಗುವ ಮೊದಲೇ ಚಂದನ್ ಗುಪ್ತ್ತಾ ಅವರ ಕೊಲೆ ಆರೋಪದಲ್ಲಿ ಅಮಾಯಕ ಮುಸ್ಲಿಮರನ್ನು ಬಂಧಿಸಲಾಗಿದೆ.
ತಿರಂಗಾ ರ್ಯಾಲಿಯಲ್ಲಿದ್ದವರಿಗೆ ಗಲಭೆ ನಡೆಸುವುದೇ ಉದ್ದೇಶವಾಗಿತ್ತು ಎನ್ನುವುದನ್ನು ಇನ್ನೊಂದು ಅಂಶ ಎತ್ತಿ ಹಿಡಿಯುತ್ತದೆ. ಚಂದನ್ ಗುಪ್ತ ಜೊತೆಗೆ ಇನ್ನೋರ್ವನ ಹೆಸರನ್ನೂ ಸೇರಿಸಿ ಇಬ್ಬರು ಸತ್ತಿದ್ದಾರೆ ಎಂದು ವದಂತಿ ಹಬ್ಬಿಸಿ ಸ್ಥಳೀಯರನ್ನು ಪ್ರಚೋದಿಸಿದರು. ಆದರೆ ಗಲಭೆ ನಡೆದ ಮರುದಿನ ಸತ್ತವನು ಪ್ರತ್ಯಕ್ಷನಾಗಿ ‘‘ನಾನು ಜೀವಂತವಿದ್ದೇನೆ, ನನ್ನ ಹೆಸರಲ್ಲಿ ದಯವಿಟ್ಟು ಗಲಭೆ ನಡೆಸದಿರಿ’’ ಎಂದು ಸಾರ್ವಜನಿಕವಾಗಿ ಮನವಿ ಮಾಡಿದ. ತಮ್ಮ ಬಂಡವಾಳವೆಲ್ಲ ಬಹಿರಂಗವಾಗುತ್ತದೆ ಎಂದು ಗೊತ್ತಾದ ಮೇಲೆ ಉತ್ತರ ಪ್ರದೇಶದ ಸಚಿವರೊಬ್ಬರು ‘‘ಕಾಸಗಂಜ್ನ ಘಟನೆ ಕ್ಷುಲ್ಲಕ’’ ಎಂದು ತೇಲಿ ಬಿಟ್ಟಿದ್ದಾರೆ. ಈ ದೇಶಕ್ಕೆ ಸಂವಿಧಾನ ದೊರಕಿದ ದಿನವಾಗಿರುವ ಗಣರಾಜ್ಯೋತ್ಸವದಂದು ರಾಷ್ಟ್ರಧ್ವಜ ಹಾರಿಸುತ್ತಿದ್ದ ಮುಸ್ಲಿಮ್ ಸಮುದಾಯದ ಮೇಲೆ ದಾಳಿ ನಡೆಸಿ, ಅವರು ಗಣರಾಜ್ಯೋತ್ಸವ ಆಚರಿಸದಂತೆ ತಡೆದಿರುವುದು ಕ್ಷುಲ್ಲಕ ವಿಷಯವೇ? ಇದೇ ಸಂದರ್ಭದಲ್ಲಿ ಓರ್ವ ಮೃತನಾಗಿದ್ದಾನೆ. ಹಲವು ಅಮಾಯಕರು ಗಾಯಗೊಂಡಿದ್ದಾರೆ. ಜೊತೆಗೆ ಅಮಾಯಕ ಮುಸ್ಲಿಮರನ್ನೇ ಪೊಲೀಸರು ಬಂಧಿಸಿ ಜೈಲಿಗೆ ತಳ್ಳಿದ್ದಾರೆ. ಗುಂಡು ಹಾರಿಸಿಕೊಂದಿರುವುದು ಸಂಘಪರಿವಾರವೇ ಆಗಿದ್ದರೂ, ತನಿಖೆಗೆ ಮುನ್ನವೇ ಕೆಲವು ಮುಸ್ಲಿಮರನ್ನು ಕೊಲೆ ಆರೋಪದಲ್ಲಿ ಬಂಧಿಸಿ ಸರಕಾರವನ್ನು, ಸಂಘಪರಿವಾರದ ಮುಖಂಡರನ್ನು ಸಂತೃಪ್ತಿ ಪಡಿಸಿದ್ದಾರೆ. ಸ್ಥಳೀಯ ಮುಸ್ಲಿಮರು ಸಾಕಷ್ಟು ನೋವು, ಸಂಕಟಗಳನ್ನು ಅನುಭವಿಸಿದ್ದಾರೆ. ಇವೆಲ್ಲವೂ ಒಂದು ಸರಕಾರಕ್ಕೆ ಕ್ಷುಲ್ಲಕ ಎಂದಾದ ಮೇಲೆ, ಸಂತ್ರಸ್ತರಿಗೆ ನ್ಯಾಯ ನೀಡುವವರಾರು?