ಹಾಥಿ ಮೇರೆ ಸಾಥಿಗೆ ರಾಣಾ ಸಾರಥಿ
70ರ ದಶಕದ ಸೂಪರ್ಹಿಟ್ ಚಿತ್ರ ‘ಹಾಥಿ ಮೇರೆ ಸಾಥಿ’ಯನ್ನು ಈಗಲೂ ಆಗಿನ ತಲೆಮಾರಿನವರು ನೆನಪಿಸಿ ಕೊಳ್ಳುತ್ತಾರೆ. ರಾಜೇಶ್ಖನ್ನಾ ಹಾಗೂ ತನುಜಾ ಅಭಿನಯದ ಈ ಚಿತ್ರವಂತೂ ಮಕ್ಕಳು, ಯುವಕರೆನ್ನದೆ ಎಲ್ಲರನ್ನೂ ಹುಚ್ಚೆಬ್ಬಿಸಿತ್ತು. ಇದೀಗ ಈಗ ಅದೇ ಹೆಸರಿನ ಬಾಲಿವುಡ್ ಚಿತ್ರವೊಂದು ನಿರ್ಮಾಣವಾಗುತ್ತಿದೆ. ಆದರೆ ಚಿತ್ರದ ಕಥೆ ಮಾತ್ರ ಸಂಪೂರ್ಣ ಬೇರೆಯಂತೆ. ಇದೊಂದು ನೈಜ ಘಟನೆಗಳಿಂದ ಪ್ರೇರಿತವಾಗಿರುವ ಈ ಚಿತ್ರದಲ್ಲಿ ಬಾಹುಬಲಿ ಖ್ಯಾತಿಯ ರಾಣಾ ದುಗ್ಗುಬಾಟಿ, ನಾಯಕನಾಗಿ ನಟಿಸಲಿದ್ದಾರೆ.
ಯಾವುದೇ ಚಿತ್ರವಾಗಲಿ ತನ್ನ ಪಾತ್ರಕ್ಕಾಗಿ ಬಹಳಷ್ಟು ಪೂರ್ವ ಸಿದ್ಧತೆಯನ್ನು ದುಗ್ಗುಬಾಟಿ ಮಾಡಿಕೊಳ್ಳುತ್ತಾರೆ. ಹಾಗೆಯೇ ‘ಹಾಥಿ ಮೇರೆ ಸಾಥಿ’ ಚಿತ್ರಕ್ಕಾಗಿ ಅವರು 20 ದಿನಗಳ ಕಾಲ ಆನೆಗಳೊಂದಿಗೆ ಕಾಲ ಕಳೆಯಲಿದ್ದು, ಅವುಗಳ ಚಲನವಲನ, ಹಾವಭಾವಗಳನ್ನು ಕೂಡಾ ಅವರು ಅಧ್ಯಯನ ಮಾಡಲಿದ್ದಾರಂತೆ.
ಮಾನವ ಹಾಗೂ ಆನೆಗಳ ನಡುವಿನ ಮಿತ್ರತ್ವದ ಹೃದಯಸ್ಪರ್ಶಿ ಕಥೆಯಿರುವ ಚಿತ್ರವು ಎಲ್ಲ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುವುದರಲ್ಲಿ ಸಂದೇಹವಿಲ್ಲವೆಂದು ರಾಣಾ ಭರವಸೆ ವ್ಯಕ್ತಪಡಿಸುತ್ತಾರೆ. ತಮಿಳಿನ ಮೈನಾ ಖ್ಯಾತಿಯ ನಿರ್ದೇಶಕ ಪ್ರಭು ಸೊಲೊಮನ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಪ್ರಭುಸೊಲೊಮನ್ಗೆ ಇದು ಚೊಚ್ಚಲ ಬಾಲಿವುಡ್ ಚಿತ್ರ ವಾಗಲಿದೆ. ಅಂದಹಾಗೆ ಪ್ರಭು ತಮಿಳಿನಲ್ಲಿ ನಿರ್ದೇಶಿಸಿದ್ದ ಕುಮ್ಕಿ ಚಿತ್ರವೂ ಆನೆಯೊಂದರ ಕುರಿತಾದ ಕಥೆಯನ್ನು ಹೊಂದಿತ್ತು. ‘ಹಾಥಿ ಮೇರೆ ಸಾಥಿ’ಯ ಮೊದಲ ಹಂತದ ಚಿತ್ರೀಕರಣ ಫೆಬ್ರವರಿ ಮಧ್ಯದಲ್ಲಿ ಥಾಯ್ಲೆಂಡ್ನಲ್ಲಿ ಆರಂಭಗೊಳ್ಳಲಿದೆ. ಸುಮಾರು 15-18 ಆನೆಗಳು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದೆ. ಚಿತ್ರದ ಶೂಟಿಂಗ್ಗೋಸ್ಕರವೇ ರಾಣಾ ಎಪ್ರಿಲ್ ಮೊದಲ ವಾರದವರೆಗೂ ಥಾಯ್ಲೆಂಡ್ನಲ್ಲಿ ಉಳಿದುಕೊಳ್ಳಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಹಾಥಿ ಮೇರೆ ಸಾಥಿ ದೀಪಾವಳಿ ವೇಳೆಗೆ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ.