ನನ್ನ ಸರಕಾರ ಭ್ರಷ್ಟಾಚಾರ ಮಾಡಿಲ್ಲ: ಮಸ್ಕತ್ನಲ್ಲಿ ಮೋದಿ
ಮಸ್ಕತ್, ಫೆ.12: ಒಮನ್ ರಾಜಧಾನಿ ಮಸ್ಕತ್ನಲ್ಲಿ ರವಿವಾರ ಭಾರತೀಯ ಸಮುದಾಯದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
‘‘ನನ್ನ ಸರಕಾರ ಭ್ರಷ್ಟಾಚಾರ ಮಾಡಿದೆ ಎಂದು ಯಾರೂ ಆರೋಪಿಸಲು ಸಾಧ್ಯವಿಲ್ಲ’’ ಎಂದು ಅವರು ಘೋಷಿಸಿದರು.
‘‘ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆ ಸುಳ್ಳಾಗದಂತೆ ನಾನು ನೋಡಿಕೊಂಡಿದ್ದೇನೆ’’ ಎಂದು ಸುಲ್ತಾನ್ ಕಾಬೂಸ್ ಕ್ರೀಡಾಂಗಣದಲ್ಲಿ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಳಿದರು.
‘‘ತೆರಿಗೆದಾರರ ಹಣದಲ್ಲಿ ಅವ್ಯವಹಾರ ಮಾಡಿರುವುದಕ್ಕೆ ಹಿಂದಿನ ಸರಕಾರಗಳು ವಿವರಣೆ ನೀಡಬೇಕಾಗಿತ್ತು. ಆದರೆ, ಖಜಾನೆಗೆ ಎಷ್ಟು ಹಣ ಹರಿದಿದೆ ಎಂದು ನನ್ನ ಸರಕಾರವನ್ನು ಕೇಳಲಾಗುತ್ತಿದೆ’’ ಎಂದರು.
ತನ್ನ ಸರಕಾರ ವಿವಿಧ ನೀತಿಗಳ ಮೂಲಕ ಈವರೆಗೆ 1,40,000 ಕೋಟಿ ರೂಪಾಯಿ ಉಳಿಸಿದೆ ಎಂದು ಅವರು ಹೇಳಿಕೊಂಡರು.
ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದದ ವಿವರಗಳನ್ನು ನೀಡುವಂತೆ ಸರಕಾರದ ಮೇಲೆ ಕಾಂಗ್ರೆಸ್ ದಿನೇ ದಿನೇ ಹೇರುತ್ತಿರುವ ಒತ್ತಡದ ಹಿನ್ನೆಲೆಯಲ್ಲಿ ಪ್ರಧಾನಿ ಮಾತುಗಳು ಮಹತ್ವ ಪಡೆದುಕೊಂಡಿವೆ.