ಕೊಳ್ಳೇಗಾಲ: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆ
ಕೊಳ್ಳೇಗಾಲ,ಫೆ.16: ಎಸ್ಸಿ, ಎಸ್ಟಿ ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಸಭೆಗೆ ಹಾಜರಾಗಬೇಕು. ಈ ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ಕೂಡಲೇ ನೋಟಿಸ್ ಜಾರಿಮಾಡಲಾಗುವುದು ಎಂದು ತಹಶೀಲ್ದಾರ್ ಕಾಮಾಕ್ಷಮ್ಮ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತ್ ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು. ಸರ್ಕಾರದಿಂದ ಜಾರಿಗೆ ಬರುವ ಅನುದಾನಗಳನ್ನು ಎಸ್.ಸಿ. ಹಾಗೂ ಎಸ್.ಟಿ ಜನಾಂಗದವರು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಿ ಎಂದರು. ಸಭೆಯಲ್ಲಿ ಹಲವು ಅಧಿಕಾರಿಗಳು ಗೈರು ಹಾಜರಾಗಿದ್ದಾರೆ. ಇವರಿಗೆ ಕೂಡಲೇ ನೋಟಿಸ್ ನೀಡಲಾಗುವುದು ಮತ್ತು ಮೇಲಾಧಿಕಾರಿಗಳಿಗೆ ದೂರು ಸಲ್ಲಿಸುತ್ತೇನೆ ಎಂದರು.
ಸಭೆಯಲ್ಲಿ ಅಂಬೇಡ್ಕರ್ ಸಂಘದ ನಿರ್ದೇಶಕ ನಟರಾಜ್ಮಾಳಿಗೆ ಮಾತನಾಡಿ, ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಕಳೆದ 3 ತಿಂಗಳಿದ ನಡೆಯುತ್ತಿದೆ. ಆದರೆ ಕಾಮಗಾರಿ ಸಮರ್ಪಕ ರೀತಿಯಲ್ಲಿ ನಡೆಯುತ್ತಿಲ್ಲ. ವಿಚಾರಿಸಿದರೆ ಸರಿಯಾದ ರೀತಿಯಲ್ಲೇ ಕಾಮಗಾರಿ ನಡೆಯುತ್ತಿದೆ ಎಂದು ಇಂಜಿನಿಯರ್ ರಮೇಶ್ ಹೇಳುತ್ತಿದ್ದಾರೆ. ಆದರೆ ಭವನಕ್ಕೆ ಸಂಪೂರ್ಣ ಕಳಪೆ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಕಾಮಾಕ್ಷಮ್ಮ ಖುದ್ದಾಗಿ ನಾನೇ ಬಂದು ಸ್ಥಳ ಪರಿಶೀಲನೆ ನಡೆಸುತ್ತೆನೆ ಎಂದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷ ಶಾಂತರಾಜು, ಸಮಾಜ ಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕಿ ಮಂಜುಳ, ಹನೂರು ವಿಶೇಷ್ ತಹಶೀಲ್ದಾರ್ ಮಹದೇವಸ್ವಾಮಿ, ನಗರ ಠಾಣೆಯ ಪಿಎಸ್ಐ ವೀಣಾನಾಯಕ್, ಲಿಂಗರಾಜು, ಇನ್ನೂ ಮುಂತಾದವರು ಹಾಜರಿದ್ದರು.