ರೈತರ ನೆರವಿಗೆ ರೈತ ಬೆಳಕು ವಿಶಿಷ್ಟ ಯೋಜನೆ; ಕೃಷಿ ಇಲಾಖೆಗೆ 5,849 ಕೋಟಿ ರೂ. ಅನುದಾನ
ರಾಜ್ಯ ಬಜೆಟ್-2018
ಬೆಂಗಳೂರು, ಫೆ.16: ಕೃಷಿ ಇಲಾಖೆಗೆ 2018-19ನೆ ಸಾಲಿನ ಆಯವ್ಯಯದಲ್ಲಿ ಒಟ್ಟಾರೆ 5,849 ಕೋಟಿ ರೂ.ಗಳನ್ನು ಅನುದಾನ ಒದಗಿಸಲಾಗಿದೆ.
* ಖುಷ್ಕಿ ಭೂಮಿಯ ರೈತರ ಸಂಕಷ್ಟಗಳನ್ನು ನೇರವಾಗಿ ಪರಿಹರಿಸಲು ರೈತರಿಗೆ ನೇರ ಆದಾಯ ನೆರವು ನೀಡುವ ‘ರೈತ ಬೆಳಕು’ ಎಂಬ ವಿಶಿಷ್ಟ ಯೋಜನೆಯನ್ನು ಪ್ರಾರಂಭಿಸಲಾಗಿದೆ.
* 2018-19ನೆ ಸಾಲಿಗೆ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ರೈತರ ಪರವಾಗಿ ರಾಜ್ಯದ ಪಾಲನ್ನು ಭರಿಸಲು 845ಕೋಟಿ ರೂ.ಅನುದಾನ ನೀಡಲಾಗಿದೆ.
* ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ ಪ್ರಸ್ತುತ 1ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಳವಡಿಸಿದ್ದು, ಈ ಪ್ರದೇಶವನ್ನು ಮುಂದಿನ ಮೂರು ವರ್ಷಗಳಲ್ಲಿ 1.5ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಿಸಲು ಉದ್ದೇಶಿಸಿದೆ.
* 2018-19ನೆ ಸಾಲಿನಲ್ಲಿ ಸಿರಿಧಾನ್ಯಗಳ ವಿಸ್ತೀರ್ಣವನ್ನು 60 ಸಾವಿರ ಹೆಕ್ಟೇರ್ಗೆ ಹೆಚ್ಚಿಸಲು ವಿಶೇಷ ಕಾರ್ಯಕ್ರಮಕ್ಕಾಗಿ 24ಕೋಟಿ ರೂ.ಒದಗಿಸಲಾಗುತ್ತಿದೆ.
* ನೆಲಗಡಲೆ ಬೆಳೆ ಬೆಳೆಯುವ ರೈತರಿಗೆ ಸಹಾಯ ಮಾಡಲು 50ಕೋಟಿ ರೂ. ವಿಶೇಷ ಪ್ಯಾಕೇಜ್ನ್ನು ತುಮಕೂರು ಜಿಲ್ಲೆಯ ಪಾವಗಡ, ಸಿರಾ ಮತ್ತು ಮಧುಗಿರಿ ತಾಲೂಕುಗಳು ಹಾಗೂ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ ತಾಲೂಕುಗಳಿಗೆ ಒದಗಿಸಲಾಗುವುದು.
* ಕಬ್ಬು ಕಟಾವು ಯಂತ್ರಗಳ ಬಳಕೆಗೆ ಕೇಂದ್ರದ ನೆರವಿನೊಂದಿಗೆ ಖಾಸಗಿ ಸಹಭಾಗಿತ್ವದಲ್ಲಿ ಕಬ್ಬು ಕಾಟವು ಯಂತ್ರಗಳ ಸಹಾಯಧನ ನೀಡಲು 20ಕೋಟಿ ರೂ.ಒದಗಿಸಲಾಗಿದೆ.
* ಆಕಸ್ಮಿಕ ಮರಣ ಹೊಂದಿದ ರೈತರ ಹಾಗೂ ಕೃಷಿ ಕಾರ್ಮಿಕರಿಗೆ ನೀಡುತ್ತಿರುವ ಪರಿಹಾರ ಧನವನ್ನು 2ಲಕ್ಷ ರೂ.ಗಳಿಗೆ ದ್ವಿಗುಣಗೊಳಿಸಲಾಗಿದೆ.
* ಬೆಳೆ ಕಟಾವು ನಂತರ ಶೇಖರಿಸಲ್ಪಟ್ಟ ಹುಲ್ಲು ಆಕಸ್ಮಿಕ ಬೆಂಕಿಯಿಂದ ನಷ್ಟವಾದರೆ ಪರಿಹಾರ ಧನವನ್ನು 20ಸಾವಿರ ರೂ.ಗೆ ಏರಿಸಲಾಗಿದೆ.
* ಚಾಮರಾಜನಗರ ಜಿಲ್ಲೆಯಲ್ಲಿ ನೂತನ ಕೃಷಿ ಕಾಲೇಜನ್ನು ಸ್ಥಾಪಿಸಲಾಗುವುದು.
* ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನೂತನ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆ.
* ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಂಜುಂಡಸ್ವಾಮಿ ಸಂಶೋಧನಾ ಪೀಠವನ್ನು ಒಂದು ಕೋಟಿ ರೂ.ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ.
* ಮಳೆ ಆಶ್ರಿತ ಬೆಳೆ ಬೆಳೆಯುವ ರೈತರಿಗೆ ಗರಿಷ್ಟ 10 ಸಾವಿರ ರೂ.ಮಿತಿಗೆ ಒಳಪಟ್ಟು ಪ್ರತಿ ಹೆಕ್ಟೇರ್ಗೆ 5 ಸಾವಿರ ರೂ. ನೀಡಲಾಗುವುದು. ಈ ಯೋಜನೆಗೆ 3500 ಕೋಟಿ ರೂ. ಖರ್ಚಾಗಲಿದ್ದು, 70 ಲಕ್ಷ ರೈತರಿಗೆ ಅನುಕೂಲವಾಗುವುದು.