ದೇಶದ ಅತಿದೊಡ್ಡ ಬ್ಯಾಂಕಿಂಗ್ ಹಗರಣದ ಹಿಂದಿನ ರೂವಾರಿ ಹೋಗಿ ಪ್ರಧಾನಿ ಮೋದಿ ಹಿಂದೆ ನಿಂತುಕೊಂಡಿದ್ದು ಹೇಗೆ?
ಬಿಜೆಪಿ ವಾದಕ್ಕೆ ತದ್ವಿರುದ್ಧ ಸ್ಪೋಟಕ ಟ್ವೀಟ್ ನಲ್ಲಿ ಇರುವುದೇನು ?
ಹೊಸದಿಲ್ಲಿ, ಫೆ.16: ಹನ್ನೊಂದು ಸಾವಿರ ಕೋಟಿ ರೂ. ಬ್ಯಾಂಕ್ ಹಗರಣದ ರೂವಾರಿ, ವಜ್ರೋದ್ಯಮಿ ನೀರವ್ ಮೋದಿ ಕೇಂದ್ರ ಸರಕಾರದ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದ್ದಾನೆ. ಈ ವಿಲಾಸಿ ಉದ್ಯಮಿ ಮೊದಲೇ ಸಂಕಷ್ಟದಲ್ಲಿರುವ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಗೆ ಇಷ್ಟು ದೊಡ್ಡ ಹೊಡೆತ ನೀಡಿ ಆರಾಮವಾಗಿ ಎದ್ದು ಹೋಗಿ ನ್ಯೂಯಾರ್ಕ್ ನಲ್ಲಿ ಕೂತಿರುವುದನ್ನು ದೇಶದ ಜನರು ಅರಗಿಸಿಕೊಳ್ಳಲು ಅಷ್ಟು ಸುಲಭವಿಲ್ಲ. ಸಾಲದ್ದಕ್ಕೆ ಹೀಗಾಗುತ್ತಿರುವುದು ಇದು ಮೊದಲಲ್ಲ. ನಮ್ಮ ಆರ್ಥಿಕ ವ್ಯವಸ್ಥೆಗೆ ಇಂತಹ ವಂಚನೆ ಮಾಡಿದವರು ಪದೇ ಪದೇ ನಮ್ಮ ದೇಶದ ಕಾನೂನು ವ್ಯವಸ್ಥೆಯನ್ನು ಈ ರೀತಿ ಅಣಕಿಸಿ ವಿದೇಶ ಸೇರಿಕೊಳ್ಳುತ್ತಿರುವುದನ್ನು ರಾಜಕೀಯ, ಆರ್ಥಿಕ ವಿಶ್ಲೇಷಕರು ಪ್ರಶ್ನಿಸುತ್ತಿದ್ದಾರೆ.
"ನೀರವ್ ಮೋದಿಯ ಹಗರಣ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಇರುವಾಗ ಆಗಿದ್ದು, ನಮ್ಮ ಸರಕಾರದಿಂದಾಗಿ ಬೆಳಕಿಗೆ ಬಂದಿದೆ" ಎಂದು ಬಿಜೆಪಿ ಹೇಳುತ್ತಿದೆ. ಆದರೆ ಕಣ್ಣಿಗೆ ರಾಚುತ್ತಿರುವ ಕೆಲವು ಕಟು ಸತ್ಯಗಳು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಜನವರಿ 31 ರಂದು ಸಿಬಿಐ ಪ್ರಕರಣ ದಾಖಲಿಸುವ ಬಹಳ ಮೊದಲೇ ನೀರವ್ ದೇಶ ಬಿಟ್ಟಿದ್ದಾರೆ. ಕುಟುಂಬ ಹಾಗು ಇತರ ಆರೋಪಿಗಳ ಸಮೇತ. ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಜೊತೆ ಗ್ರೂಪ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಅದು ದೇಶದ ಆಯ್ದ ಕೆಲವೇ ಕೆಲವು ಉದ್ಯಮ ನಾಯಕರು ಪ್ರಧಾನಿ ಜೊತೆ ಭಾಗವಹಿಸಿದ್ದ ಫೋಟೋ ಶೂಟ್. ಅಂತಹ ನಿಯೋಗದೊಳಗೆ ನೀರವ್ ಮೋದಿ ಅಷ್ಟು ಸುಲಭದಲ್ಲಿ ಸೇರಿಕೊಂಡಿದ್ದು ಹೇಗೆ?, ನರೇಂದ್ರ ಮೋದಿಯಂತಹ 'ಸ್ಟ್ರಿಕ್ಟ್' ಹಾಗು "ನಾ ಖಾವುಂಗಾ , ನಾ ಖಾನೇ ದುಂಗಾ" ಖ್ಯಾತಿಯ ಪ್ರಧಾನಿಯ ಜೊತೆ ವಿದೇಶದ ಪ್ರತಿಷ್ಠಿತ ವೇದಿಕೆಯೊಂದರಲ್ಲಿ ಭಾಗವಹಿಸಲು ಆಯ್ಕೆಯಾಗುವುದು ಅಷ್ಟೊಂದು ಸುಲಭವೇ ?, ಆಯ್ಕೆ ಮಾಡಿದ್ದು ಸಿಐಐ ( ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ) ಎಂದು ಬಿಜೆಪಿ ಜಾರಿಕೊಳ್ಳುತ್ತಿದೆ. ಆದರೆ ಹಾಗೆ ಸುಮ್ಮನೆ ಯಾವುದಾದರೂ ಉದ್ಯಮ ಸಂಸ್ಥೆಯ ಮಾಲಕ ಅಷ್ಟು ಪ್ರಮುಖ ಕಾರ್ಯಕ್ರಮಕ್ಕೆ ಆಯ್ಕೆಯಾಗುತ್ತಾನೆಯೇ?, ಆತನ ಹಿನ್ನೆಲೆ, ಆರ್ಥಿಕ ವ್ಯವಹಾರಗಳು ಇತ್ಯಾದಿಗಳ ಬಗ್ಗೆ ಪರಿಶೀಲನೆ ನಡೆಯುವುದಿಲ್ಲವೇ?, 2014 ರಿಂದಲೇ ಸಿಬಿಐ, ಜಾರಿ ನಿರ್ದೇಶನಾಲಯ, ಐಟಿ ಇಲಾಖೆಗಳ ಕೆಂಗಣ್ಣಿಗೆ ಗುರಿಯಾಗಿದ್ದ ನೀರವ್ ಮೋದಿ ಅದೇಗೆ ಪ್ರಧಾನಿ ಮೋದಿ ಜೊತೆ ಅಷ್ಟು ಸುಲಭವಾಗಿ ಹೋಗಿ ಫೋಟೋ ತೆಗೆಸಿಕೊಂಡರು?, ಈ ಪ್ರಶ್ನೆಗಳನ್ನು ಕಾಂಗ್ರೆಸ್ ಮಾತ್ರ ಕೇಳುತ್ತಿಲ್ಲ. ಸಾಮಾನ್ಯ ಜ್ಞಾನ ಇರುವ ಪ್ರತಿಯೊಬ್ಬ ಪ್ರಜ್ಞಾವಂತನ ಮನಸ್ಸಿನಲ್ಲಿ ಏಳುವ ಪ್ರಶ್ನೆಗಳಿವು. ಇದಕ್ಕೆ ಸಮರ್ಪಕ ಉತ್ತರ ನೀಡುವ ಜವಾಬ್ದಾರಿ ಈಗ ಬಿಜೆಪಿ ಹಾಗು ಕೇಂದ್ರ ಸರ್ಕಾರದ ಮೇಲಿದೆ. ಅದಕ್ಕಿಂತ ಹೆಚ್ಚಾಗಿ ಪ್ರಧಾನಿ ಮೋದಿ ಮೇಲಿದೆ. ಆದರೆ ಈ ಪ್ರಶ್ನೆಗಳಿಗೆ ರಾಜಕೀಯ ವರಸೆಯನ್ನು ಬಿಟ್ಟು ಸಮರ್ಪಕ ಉತ್ತರ ಕೊಡುವುದು ಅಷ್ಟು ಸುಲಭವಿಲ್ಲ.
ದಾವೋಸ್ ಫೋಟೋ ಶೂಟ್ ಪ್ರಶ್ನೆ ಅಲ್ಲಿಗೇ ಮುಗಿಯುವುದಿಲ್ಲ. ಹಿರಿಯ ಪತ್ರಕರ್ತೆ ಸ್ವಾತಿ ಚತುರ್ವೇದಿ ಮಾಡಿರುವ ಟ್ವೀಟ್ ಈಗ ದೊಡ್ಡ ವಿವಾದವನ್ನೆಬ್ಬಿಸಿದೆ. ನೀರವ್ ಮೋದಿ ಪ್ರಕರಣ ಬೆಳಕಿಗೆ ಬಂದ ಬಳಿಕ ಮಾಡಿದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು ದಾವೋಸ್ ನಲ್ಲಿ ನೀರವ್ ಮೋದಿಯೊಂದಿಗೆ ಪ್ರಧಾನಿ ಮೋದಿ ಮಾತನಾಡಲೇ ಇಲ್ಲ ಎಂದು ಹೇಳಿಕೊಂಡರು. ಆದರೆ ಸ್ವಾತಿ ಚತುರ್ವೇದಿ ಮಾಡಿರುವ ಸ್ಪೋಟಕ ಟ್ವೀಟ್ ಈ ಹೇಳಿಕೆಗೆ ತದ್ವಿರುದ್ಧವಿದೆ. ಅವರ ಪ್ರಕಾರ ದಾವೋಸ್ ನಲ್ಲಿ ನೀರವ್ ಮೋದಿ ಪ್ರಧಾನಿ ಮೋದಿ ಜೊತೆ ವಿಶೇಷ ಖಾಸಗಿ ಭೇಟಿ ಮಾಡಿದ್ದಾರೆ. ಅಷ್ಟೇ ಅಲ್ಲ, ಈ ಭೇಟಿಯಲ್ಲಿ ನೀರವ್ ಸೋದರ ಹಾಗು ಬ್ಯಾಂಕಿಂಗ್ ಹಗರಣದ ಇನ್ನೊಬ್ಬ ಆರೋಪಿ ನಿಶಾಲ್ ( ಬೆಲ್ಜಿಯನ್ ಪ್ರಜೆ) ಕೂಡ ಹಾಜರಿದ್ದ!.
ಇಂಡಿಯಾ ಟುಡೇ ಸಮೂಹದ ಹಿರಿಯ ಸಂಪಾದಕ ರಾಹುಲ್ ಕವಲ್ ಮಾಡಿರುವ ಟ್ವೀಟ್ ಕೂಡ ಮೋದಿ ಸರಕಾರವನ್ನು ಸರಿಯಾಗಿಯೇ ಚುಚ್ಚಿದೆ. ಇಂತಹದೇ ಟ್ವೀಟ್ ಅನ್ನು ಹಿರಿಯ ಪತ್ರಕರ್ತೆ ಸಾಗರಿಕ ಘೋಷ್ ಕೂಡ ಮಾಡಿದ್ದರು. ಆದರೆ ಈಗ ಮೋದಿ ಬೆಂಬಲಿಗ ಮಾಧ್ಯಮ ಎಂದೇ ಹಣೆಪಟ್ಟಿ ಪಡೆದಿರುವ 'ಇಂಡಿಯಾ ಟುಡೇ' ಸಂಸ್ಥೆಯ ಹಿರಿಯ ಸಂಪಾದಕರೇ ಹೇಳಿರುವುದು ಗಮನಾರ್ಹ. 'ಬ್ಯಾಂಕಿಂಗ್ ಹಗರಣದ ಬಗ್ಗೆ ಮೊದಲು ಗಮನ ಸೆಳೆದ ಎಸ್ ವಿ ಹರಿ ಪ್ರಸಾದ್ ಪ್ರಕಾರ ಅವರು ವಜ್ರೋದ್ಯಮಿ ಮೆಹುಲ್ ಚೋಕ್ಸಿಯ ದೊಡ್ಡ ವಂಚನೆ ಬಗ್ಗೆ ಜುಲೈ 2016 ರಲ್ಲೇ ಪ್ರಧಾನಿ ಕಚೇರಿಗೆ ದೂರು ನೀಡಿದ್ದರು. ಪಿಎಂಒ ಅದನ್ನು ರಿಜಿಸ್ಟ್ರಾರ್ ಆಫ್ ಕಂಪೆನೀಸ್ ( ಆರ್ ಒಸಿ ) ಗೆ ಫಾರ್ವರ್ಡ್ ಮಾಡಿ ಬಿಟ್ಟಿತು. ಆರ್ ಒಸಿ ದೂರುದಾರ ಪ್ರಸಾದ್ ಬಳಿ ಒಂದೇ ಒಂದು ಸಾಕ್ಷ್ಯವನ್ನೂ ಕೇಳದೆ ಪ್ರಕರಣವನ್ನು ಮುಗಿಸಿ ಅವರಿಗೆ ಮಾಹಿತಿ ನೀಡಿತು' ಎಂದು ಕವಲ್ ಟ್ವೀಟ್ ಮಾಡಿದ್ದಾರೆ. ಇದು ಅತ್ಯಂತ ಗಂಭೀರ ಪ್ರಶ್ನೆ. ಬಿಜೆಪಿ ಹೇಳಿದಂತೆಯೇ ಇದು ಯುಪಿಎ ಸಂದರ್ಭ ನಡೆದ ಹಗರಣ ಎಂದಿಟ್ಟುಕೊಂಡರೂ 2016 ರಿಂದ 2018 ರವರೆಗೆ ಮೋದಿ ಸರಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇರಲು ಕಾರಣಗಳೇನು?, ಇಷ್ಟು ದೊಡ್ಡ ವಂಚನೆ ಪ್ರಕರಣದ ಹಿಂದಿರುವವರನ್ನು ಮೊನ್ನೆ ಮೊನ್ನೆ ಪ್ರಧಾನಿ ಮೋದಿ ತನ್ನ ಹಿಂದೆ ನಿಂತು ಫೋಟೋ ತೆಗೆಸಿಕೊಳ್ಳಲು ಬಿಟ್ಟಿದ್ದು ಹೇಗೆ?, ಅವರು ದೇಶ ಬಿಟ್ಟು ಹೋಗಿ ಆರಾಮವಾಗಿ ವಿದೇಶದಲ್ಲಿ ನೆಲೆಸಿದ ಮೇಲೆ ಪ್ರಕರಣ ದಾಖಲಾಗಿ, ದಾಳಿ ನಡೆದಿದ್ದು ಹೇಗೆ?... ಪ್ರಶ್ನೆಗಳು ಮುಗಿಯದಷ್ಟಿವೆ. ಆದರೆ ಉತ್ತರಿಸುವವರು ಯಾರು ?
ಹಿರಿಯ ಪತ್ರಕರ್ತ ಶೇಖರ್ ಗುಪ್ತ ಕೇಂದ್ರ ಸರಕಾರ ಹಾಗು ಬಿಜೆಪಿ ನೀಡುತ್ತಿರುವ ಸಮಜಾಯಿಷಿಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. "ಆರೋಪಿ ಮೋದಿಗಳು ಜನವರಿ ಮೊದಲ ವಾರದಲ್ಲೇ ದೇಶ ಬಿಟ್ಟಿದ್ದಾರೆ. ವಾಪಸ್ ಬಾರದಿರುವ ಉದ್ದೇಶದಲ್ಲೇ ಅವರು ಹೋಗಿದ್ದಾರೆ. ಅವರಿಗೆ ಖಂಡಿತ ಎಚ್ಚರಿಕೆ ನೀಡಲಾಗಿತ್ತು ಎಂದಾಯಿತು. ಆ ಪೈಕಿ ಒಬ್ಬ ಮೋದಿ ದಾವೋಸ್ ನಲ್ಲಿ ಪ್ರಧಾನಿ ಜೊತೆ ಕಂಡು ಬರುತ್ತಾನೆ. ದಾವೋಸ್ ಸಮಾವೇಶ ಮುಗಿದ ಒಂದು ದಿನದ ಬಳಿಕ ಸಾವಕಾಶವಾಗಿ ಸಿಬಿಐ ಪ್ರಕರಣ ದಾಖಲಿಸುತ್ತದೆ. ಇದು ಕೇವಲ ಆಕಸ್ಮಿಕ ಅಲ್ಲ. ಇದರಲ್ಲಿ ಏನೋ ನಡೆದಿದೆ" ಎಂದು ಶೇಖರ್ ಟ್ವೀಟ್ ಮಾಡಿದ್ದಾರೆ.
ನೀರವ್ ಮೋದಿ ಜನವರಿ ಒಂದರಂದು ದೇಶ ಬಿಟ್ಟಿದ್ದಾರೆ. ಅವರ ಪತ್ನಿ , ಅಮೇರಿಕನ್ ಪ್ರಜೆ ಜನವರಿ 6 ರಂದು ಹೋಗಿದ್ದಾರೆ. ಇನ್ನೋರ್ವ ಆರೋಪಿ ಮೆಹುಲ್ ಚೋಕ್ಸಿ ಜನವರಿ 4 ರಂದು ಪಲಾಯನ ಮಾಡಿದ್ದಾರೆ. ನೀರವ್ ಸೋದರ ಕೂಡ ಆರೋಪಿ. ಆತ ಬೆಲ್ಜಿಯನ್ ಪ್ರಜೆ . ಆತನೂ ದೇಶದಲ್ಲಿಲ್ಲ. ಬ್ಯಾಂಕ್ ದೂರು ಕೊಟ್ಟಿದ್ದು ಜನವರಿ 29 ರಂದು. ಸಿಬಿಐ ಲುಕ್ ಔಟ್ ನೋಟೀಸ್ ಜಾರಿ ಮಾಡಿದ್ದು ಜನವರಿ 31 ರಂದು. ಮೊದಲ ದೂರುದಾರನ ಪ್ರಕಾರ ಪ್ರಧಾನಿ ಮೋದಿ ಕಚೇರಿಗೆ ಪ್ರಕರಣದ ಬಗ್ಗೆ ದೂರು ಹೋಗಿದ್ದು 2016ರಲ್ಲಿ !, ಈ ದಿನಾಂಕಗಳು ಹಾಗು ಇಸವಿಗಳನ್ನು ಗಮನಿಸಿದರೆ ಸದ್ಯದ ಯಾವುದೇ ಇಸವಿಯಲ್ಲಿ ಭಾರತದ ಆರ್ಥಿಕತೆಗೆ 'ಅಚ್ಛೇ ದಿನ್' ಬರುವ ಸಾಧ್ಯತೆಯಂತೂ ಇಲ್ಲ.